ADVERTISEMENT

ಡಿವಿಜಿ ಕೊಡುಗೆ ಅಪಾರ: ಡಾ.ಶಿವಪ್ಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 9:40 IST
Last Updated 27 ಜನವರಿ 2012, 9:40 IST
ಡಿವಿಜಿ ಕೊಡುಗೆ ಅಪಾರ: ಡಾ.ಶಿವಪ್ಪ
ಡಿವಿಜಿ ಕೊಡುಗೆ ಅಪಾರ: ಡಾ.ಶಿವಪ್ಪ   

ಮುಳಬಾಗಲು: ಕನ್ನಡ ಸಾಹಿತ್ಯ ಸಂಸ್ಕೃತಿಗೆ ಡಿ.ವಿ.ಗುಂಡಪ್ಪ ಕೊಡುಗೆ ಅಪಾರ ಎಂದು ಡಾ.ಜಿ.ಶಿವಪ್ಪ ಹೇಳಿದರು.

ಪಟ್ಟಣದ ಡಿವಿಜಿ ರಂಗಮಂಟಪದಲ್ಲಿ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬುಧವಾರ ನಡೆದ ವಿಚಾರಗೋಷ್ಠಿಯಲ್ಲಿ ಅವರು `ಮುಳಬಾಗಲು ಸಾಹಿತ್ಯ ಮತ್ತು ಸಂಸ್ಕೃತಿ~ ಕುರಿತು ಮಾತನಾಡಿದರು.
ದಾಸ ಸಾಹಿತ್ಯ, ವಿಜ್ಞಾನ, ಸೂಫಿ ತತ್ವ, ಇತಿಹಾಸ, ಸಂಶೋಧನೆ, ಸಾಹಿತ್ಯ ಕ್ಷೇತ್ರದಲ್ಲಿ ಮುಳಬಾಗಲು ಗಮನ ಸೆಳೆದಿದೆ. ಡಿವಿಜಿಯವರು ಕನ್ನಡ ಭಾಷೆ- ಪತ್ರಿಕೋದ್ಯಮ- ಸಂಸ್ಕೃತಿಗೆ ನೀಡಿರುವ ಕೊಡುಗೆ ಅಪಾರ ಎಂದರು.

ಬೊಂಡು ನರಸಿಂಹ, ಕೊಲಿಗಾರ ಮುನಿಶಾಮಿ, ಉತ್ತನೂರು ರಾಜಮ್ಮ, ಬೈರಕೂರು ವೆಂಕಟೇಶ್, ಡಾ.ಜೆ.ಬಾಲಕೃಷ್ಣ, ವಿ.ಚಂದ್ರಶೇಖರ್ ನಂಗಲಿ. ಕೆ.ಆರ್.ನರಸಿಂಹನ್, ವಿಜ್ಞಾನ ಲೇಖಕ ಎಚ್.ಎ. ಪುರುಷೊತ್ತಮರಾವ್, ನೆರೆಯ ಆಂಧ್ರಪ್ರದೇಶದ ಬೈಯ್ಯಪಲ್ಲಿ ಮುನಿರತ್ನರೆಡ್ಡಿ ಸೇರಿದಂತೆ ಹಲವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಮುಳಬಾಗಲು ತಾಲ್ಲೂಕಿನ ಇತಿಹಾಸ ಕುರಿತು ಪರಿಚಯ ಮಾಡಿದ ಡಾ.ಗೌರಿನಾಯ್ಡು, ಜಿಲ್ಲೆಯ ್ಲಲಿಯೇ ಮುಳಬಾಗಲು ತಾಲ್ಲೂಕಿನ ಮೂಡಿ ಯನೂರು ಗ್ರಾಮದಲ್ಲಿ ಅತ್ಯಂತ ಹಳೆಯದಾದ ಶಿಲಾಶಾಸನ ದೊರೆಕಿದೆ. ಜಿಲ್ಲೆಯಲ್ಲಿಯೇ ತಾಲ್ಲೂಕು 664 ಕೆರೆಗಳನ್ನು ಹೊಂದಿದೆ. ಆವಣಿ ಗ್ರಾಮವೂ ಬಾಣರ ಬೃಹತ್ ಸಂಸ್ಥಾನವಾಗಿತ್ತು. ವಿಜಯನಗರ ಕಾಲದಲ್ಲಿ ಮುಳಬಾಗಲು, ಮುಳವಾಯಿ ಪಟ್ಟಣ, ಪೂರ್ವದ ಹೆಬ್ಬಾಗಿಲು ಎಂದು ಹೆಸರು ಪಡೆದಿತ್ತು. ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿಯಾಗಿಯೂ ಉನ್ನತ ಸ್ಥಿತಿಯಲ್ಲಿತ್ತು ಎಂದರು.

ಲಕ್ಕಣ ದಂಡೇಶರ ಕುರಿತು ಮಾತನಾಡಿದ ಡಾ.ಬಿ.ನಂಜುಂಡಸ್ವಾಮಿ, ತಾಲ್ಲೂಕಿನ ವಿರೂ ಪಾಕ್ಷಿ ಗ್ರಾಮದಲ್ಲಿ ಜನಿಸಿದ ದಂಡೇಶ ಮಹಾನ್ ಸೇನಾನಿ ಹಾಗೂ ಕೃತಿಕಾರರಾಗಿದ್ದರು. ಅವರು ಶತಕ ಚಿಂತಾಮಣಿ ರಚಿಸಿದ್ದರು ಎಂದು ತಿಳಿಸಿದರು.

ಬಂಡಾಯ- ದಲಿತ ಸಾಹಿತ್ಯದ ಕುರಿತು ಮಾತನಾಡಿದ ಕೀಲುಹೊಳಲಿ ಸತೀಶ್, ಜಿಲ್ಲೆಯು ಬಂಡಾಯ ಮತ್ತು ದಲಿತ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದೆ ಎಂದರು. ದಲಿತ ಕವಿಗಳಾದ ಕೋಟಗಾನಹಳ್ಳಿ ರಾಮಯ್ಯ ಮತ್ತು ಗೊಲ್ಲಹಳ್ಳಿ ಶಿವಪ್ರಕಾಶ್ ಹೆಸರು ಉಲ್ಲೇಖಿಸಿದರು. ಎಂ.ವಿ.ಜನಾರ್ಧನ್ ನಾಡುನುಡಿಯ ಬಗ್ಗೆ ಮಾತನಾಡಿದರು. ರುದ್ರೇಶ್ ಬಿ. ಅದರಂಗಿ ಅಧ್ಯಕ್ಷತೆ ವಹಿಸಿದ್ದರು.

ಸಮ್ಮೇಳನದ ಅಧ್ಯಕ್ಷ ಕೆ.ಆರ್.ನರಸಿಂಹನ್, ಗೌರವಾಧ್ಯಕ್ಷ ಯು.ವಿ.ನಾರಾಯಣಾಚಾರ್, ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪ್ರಹ್ಲಾದರಾವ್, ಖಜಾಂಚಿ ಪೋಟೊ ಅಯ್ಯರ್, ತಾಲ್ಲೂಕು ಘಟಕದ ಅಧ್ಯಕ್ಷ ಕನ್ನಡ ಭಟ ವೆಂಕಟಪ್ಪ, ಎ.ಅಪ್ಪಾಜಿಗೌಡ, ಮಂಜು ಕನ್ನಿಕಾ ಭಾಗವಹಿಸಿದ್ದರು. ವೆಂಕಟಗಿರಿಯಪ್ಪ ಸ್ವಾಗತಿಸಿದರು. ಡಾ.ಎಂ.ಎನ್.ಮೂರ್ತಿ ನಿರೂಪಿ ಸಿದರು. ಎಂ.ನಾರಾಯಣಪ್ಪ ವಂದಿಸಿದರು.

ಗಾಯನೋತ್ಸವದಲ್ಲಿ ಸಂಗೀತ ವಿದ್ವಾನ್ ಪ್ರಭಾಕರಶಾಸ್ತ್ರೀ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಮಹಿಳಾಗೋಷ್ಠಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಎಂ.ಜಿ.ಪಾಪಮ್ಮ, ಹೆಣ್ಣು ಮಕ್ಕಳ ಶಿಕ್ಷಣ- ಹಕ್ಕುಗಳು ಕುರಿತು ಸಿ.ಆರ್.ವೆಂಕಟಮ್ಮ ವಿಚಾರ ಮಂಡಿಸಿದರು. ವೈದ್ಯಾಧಿಕಾರಿ ಡಾ.ಸುರಭಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.