ADVERTISEMENT

ನಗರಸಭೆ: 23 ಲಕ್ಷ ಉಳಿತಾಯ ಬಜೆಟ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 8:10 IST
Last Updated 25 ಮಾರ್ಚ್ 2012, 8:10 IST

ಕೆಜಿಎಫ್: ರಾಬರ್ಟ್‌ಸನ್‌ಪೇಟೆ ನಗರ ಸಭೆ ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಗುರುವಾರ ನಗರಸಭೆ ಯಲ್ಲಿ ಮಂಡಿಸಲಾಗಿದ್ದು, 23,41,613 ರೂಪಾಯಿ ಉಳಿತಾಯವನ್ನು ತೋರಿಸಲಾಗಿದೆ.
ನಗರಸಭೆ ವಹಿವಾಟು ಈ ವರ್ಷ ಸುಮಾರು 37 ಕೋಟಿ ರೂಪಾಯಿ ಮೀರಲಿದೆ. ನಿರೀಕ್ಷಿತ ಆದಾಯ 37, 26,37,649 ರೂಪಾಯಿಗಳಾಗಿದ್ದು, ವೆಚ್ಚ 37,02,96,036 ರೂಪಾಯಿ ಗಳೆಂದು ಅಂದಾಜು ಮಾಡಲಾಗಿದೆ.

ನಗರದ ರಸ್ತೆ ಅಭಿವೃದ್ಧಿಗೆ 6.30 ಕೋಟಿ, ಹೈಮಾಸ್ಟ್ ಮತ್ತಿತರ ಬೀದಿ ದೀಪಗಳಿಗೆ 2.27 ಕೋಟಿ, ಪ.ಜಾತಿ, ವರ್ಗ, ಹಿಂದುಳಿದ ವರ್ಗ ಮತ್ತು ಅಂಗವಿಕಲರ ಅಭ್ಯುದಯಕ್ಕೆ 2.13 ಕೋಟಿ, ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸಲಕರಣೆ ಖರೀದಿಸಲು 45 ಲಕ್ಷ, ನಗರಸಭೆ ಆಸ್ತಿ ರಕ್ಷಣೆಗೆ ತಂತಿ ಬೇಲಿ ಅಳವಡಿಸುವುದಕ್ಕೆ 25 ಲಕ್ಷ, ಶವ ಸಾಗಿಸುವ ವಾಹನ ಕೊಳ್ಳಲು 10 ಲಕ್ಷ ರೂಪಾಯಿ ಮೀಸಲಿಡಲಾಗಿದೆ.

ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ 1.20 ಕೋಟಿ, ವಾಣಿಜ್ಯ ಮಳಿಗೆಗಳು ಮತ್ತು ನೆಲ ಬಾಡಿಗೆಯಿಂದ 1 ಕೋಟಿ, ಸರ್ಕಾರದ ವಿವಿಧ ಅನುದಾನ 14.96 ಕೋಟಿ ಆದಾಯ ನಿರೀಕ್ಷಿಸಲಾಗಿದೆ.ಮಾರಿಕುಪ್ಪಂ ಚೆಲ್ಲಪ್ಪ ಲೈನಿನಲ್ಲಿರುವ ವಿಕ್ಟರ್ ಸ್ಪೋರ್ಟ್ಸ್ ಕ್ಲಬ್ ದುರಸ್ತಿಗೆ 5 ಲಕ್ಷ, ಗಿಲ್ಬರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ದುರಸ್ತಿಗೆ 5 ಲಕ್ಷ, ಚಾಂಪಿಯನ್‌ರೀಫ್ಸ್ ಯೂನಿಯನ್  ಕಚೇರಿ ದುರಸ್ತಿಗೆ 5 ಲಕ್ಷ ಖರ್ಚು ಮಾಡಲಾಗುವುದು.
 
ಆಂಡರಸನ್‌ಪೇಟೆ ಬಸ್ ನಿಲ್ದಾಣ ಅಭಿವೃದ್ಧಿಪಡಿಸಿ ಡಾ.ರಾಜ್‌ಕುಮಾರ್ ಹೆಸರನ್ನಿಡಲು ಸಭೆ ತೀರ್ಮಾನಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ಎಂ.ಭಕ್ತವತ್ಸಲಂ, ನಗರಸಭೆಯನ್ನು ಸೂಪರ್‌ಸೀಡ್ ಮಾಡಿಸಲು ಅಧಿಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳು ಕಸರತ್ತು ನಡೆಸುತ್ತಿದ್ದಾರೆ.

1992 ರಿಂದ ಇದೇ ರೀತಿ ಐದು ಬಾರಿ ಸೂಪರ್‌ಸೀಡ್ ಮಾಡಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ. ಶಾಸಕರ ಅನುದಾನ ಕಳೆದ ಮೂರು ವರ್ಷಗಳಿಂದ ನಗರಕ್ಕೆ ಒಂದು ಪೈಸೆ ಬಂದಿಲ್ಲ. ಸಂಸತ್ ಸದಸ್ಯರು ವಿನಿಯೋಗಿಸಿದ 35 ಲಕ್ಷ ರೂಪಾಯಿ ಎಲ್ಲಿ ಎಂಬುದೇ ತಿಳಿದಿಲ್ಲ. ಇಂತಹ ಅವ್ಯವಹಾರಗಳ ಬಗ್ಗೆ  ತನಿಖೆ ನಡೆಸುವುದನ್ನು ಬಿಟ್ಟು, ಹಿಂದೆ ಅಧಿಕಾರಿಗಳು ಮಾಡಿದ ತಪ್ಪನ್ನು ಪ್ರಸ್ತುತ ಕೌನ್ಸಿಲ್ ಮೇಲೆ ಹೊರಿಸು ವುದು ಅಕ್ಷಮ್ಯ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಪಿ.ದಯಾನಂದ ಆಯವ್ಯಯ ಮಂಡಿಸಿದರು. ಆಯುಕ್ತ ಬಾಲಚಂದ್ರ ಅಗತ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.