ಬಂಗಾರಪೇಟೆ: 'ಮಾನವನ ಹಕ್ಕು, ಮಾನ ಪ್ರಾಣ, ಆಸ್ತಿ ರಕ್ಷಣೆಗೆ ಕಾನೂನು ಬಲಗೊಂಡಿದೆ' ಎಂದು ಪಟ್ಟಣದ ಅಪರ ಸಿವಿಲ್ ನ್ಯಾಯಾಧೀಶ ಎ.ಸಿ.ದಯಾನಂದಮೂರ್ತಿ ಹೇಳಿದರು. ಬಂಗಾರಪೇಟೆ ತಾಲ್ಲೂಕು ಕಾನೂನು ಸೇವಾ ಸಮಿತಿ, ಕೆಜಿಎಫ್ ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಹುಟ್ಟಿದಾಗಿನಿಂದ ಕೊನೆಯ ತನಕ ಕಾನೂನು ರಕ್ಷಣೆ ಮಾಡುತ್ತದೆ. ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಜೀವಿಸುವ ಹಕ್ಕು ಎಂದರೆ ಪ್ರಾಣಿಗಳಂತೆ ಜೀವಿಸುವುದಲ್ಲ. ಗೌರವ ಘನತೆಯೊಂದಿಗೆ ಜೀವನ ನಡೆಸುವುದು. ಅದನ್ನು ಅನುಭವಿಸಲು ಕಾನೂನು ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿದೆ ಎಂದರು.
ಮಕ್ಕಳಿಗಾಗಿಯೆ ವಿಶೇಷ ಹಕ್ಕುಗಳನ್ನು ಕಲ್ಪಿಸಲಾಗಿದೆ. 6ರಿಂದ 14 ವರ್ಷದವರೆಗಿನ ಎಲ್ಲ ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಮಕ್ಕಳ ಹಕ್ಕುಗಳಿಂದ ವಂಚಿತರಾಗದಂತೆ ಪೋಷಕರು, ಶಿಕ್ಷಕರು, ಸಮಾಜ ಕಾಳಜಿ ವಹಿಸಬೇಕಿದೆ ಎಂದರು.
ತಂದೆ ತಾಯಿ ಬಲವಂತದಿಂದ ಮದುವೆ ಮಾಡಿಕೊಂಡ ಯುವತಿಗೆ ವಿವಾಹ ಇಷ್ಟ ಇಲ್ಲದಿದ್ದರೆ ಮತ್ತು ಅಪ್ರಾಪ್ತ ವಯಸಿನಲ್ಲಿ ವಿವಾಹವಾದರೆ ಅದು ಕಾನೂನು ಪ್ರಕಾರ ಅಸಿಂಧುವಾಗಲಿದೆ ಎಂದರು.
ಕೆಲಸಕ್ಕೆ ಸಂಬಂಧಿಸಿದಂತೆ ಕನಿಷ್ಟ ವೇತನ ಕಾಯ್ದೆ ಜಾರಿಯಾಗಿದೆ. ಹೆಣ್ಣು, ಗಂಡು ಎನ್ನುವ ತಾರತಮ್ಯ ಮಾಡದೆ ಕನಿಷ್ಟ ವೇತನ ನೀಡಬೇಕಿದೆ. ಯಾವುದೆ ತೊಂದರೆ ಅಥವಾ ಹಕ್ಕು ಉಲ್ಲಂಘನೆಯಾದರೆ ಕಾನೂನು ನೆರವು ಸಿಗಲಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.