ADVERTISEMENT

ರಾಜಕಾರಣದಲ್ಲಿ ಸಂಸ್ಕಾರ ಮಾಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 7:25 IST
Last Updated 27 ಡಿಸೆಂಬರ್ 2017, 7:25 IST

ಕೋಲಾರ: ‘ರಾಜಕಾರಣ ಎಂದರೆ ಥಳಕು ಎಂಬಂತಾಗಿದೆ. ಪಂಚಾಯಿತಿಯಿಂದ ಲೋಕಸಭೆವರೆಗೂ ರಾಜಕಾರಣದಲ್ಲಿ ಸಂಸ್ಕಾರ ಮಾಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು. ತಾಲ್ಲೂಕಿನ ಅಣ್ಣಿಹಳ್ಳಿಯಲ್ಲಿ ಜಿಲ್ಲಾ ಕೇದ್ರ ಸಹಕಾರ (ಡಿಸಿಸಿ) ಬ್ಯಾಂಕಿನಿಂದ ರೈತರಿಗೆ ಸೋಮವಾರ ಸಾಲ ವಿತರಿಸಿ ಮಾತನಾಡಿದರು‌.

ರಾಜಕಾರಣಕ್ಕೆ ಬರಲು ಪ್ರೇರಣೆ ಹಣ ಗಳಿಸುವುದಲ್ಲ. ನಮಗೆ ಹಿರಿಯರಾಗಿದ್ದವರು ವಿಶಾಲ ಹೃದಯವಂತರು. ಜನರ ಕೆಲಸ ಮಾಡುವುದು ಹಾಗೂ ಅವರೊಂದಿಗೆ ಹೇಗಿರಬೇಕು ಎಂಬ ಸಂಸ್ಕಾರ ತಿಳಿಸಿಕೊಟ್ಟಿದ್ದಾರೆ ಎಂದರು.

ಅನ್ನ ನೀಡುವ ರೈತ ತನ್ನ ಮನೆಗೆ ಬೇಕಾದಷ್ಟು ಧಾನ್ಯ ಬೆಳೆದು ಸುಮ್ಮನಾದರೆ ನಗರದಲ್ಲಿ ಇರುವವರ ಗತಿಯೇನು ಎಂಬ ಪ್ರಶ್ನೆ ಹಾಕಿಕೊಳ್ಳಿ. ಯೋಧ ಹಾಗೂ ರೈತ ಇಬ್ಬರು ದುಡಿವ ವರ್ಗದವರು. ಇವರು ಗೌರವದಿಂದ ಬದುಕುವ ವಾತಾವರಣದ ಕುರಿತು ಇದುವರೆಗೂ ಯಾಕೆ ಯಾರು ಸರಿಯಾಗಿ ಯೋಚಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

‘ತಾಲ್ಲೂಕಿನ ವೀರಾಪುರ ಸಮೀಪ ರಕ್ಷಣಾ ಇಲಾಖೆ ಭೂಸ್ವಾಧೀನ ಪಡಿಸಿಕೊಂಡಿರುವ ರೈತರಿಗೆ ಪರಿಹಾರ ಕಲ್ಪಿಸಲು ₹ 25 ಕೋಟಿ ಮಂಜೂರು ಆಗಲಿದ್ದು, ಮಧ್ಯವರ್ತಿಗಳ ಪಾಲಾಗದಂತೆ ಎಚ್ಚರ ವಹಿಸಬೇಕಾಗಿದೆ’ ಎಂದು ಮುಖಂಡ ಕೆ.ಶ್ರೀನಿವಾಸಗೌಡ ತಿಳಿಸಿದರು.

ರೈತರಿಗೆ ಪರಿಹಾರ ಹಣ ಸಿಗುವಲ್ಲಿ ಆಗಿದ್ದ ಅನ್ಯಾಯದ ವಿರುದ್ಧ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡಲಾಗಿದೆ. ಇದರಿಂದಾಗಿ ಪರಿಹಾರದ ಹಣ ಬರುತ್ತಿದ್ದು, ಮಧ್ಯವರ್ತಿಗಳ ಪಾಲಾಗಬಾರದು ಎಂದರು.

ರೈತರ ಹಿತ ಕಾಯುತ್ತಿರುವ ಡಿಸಿಸಿ ಬ್ಯಾಂಕಿನಲ್ಲೇ ಈ ಹಣ ಠೇವಣಿ ಇಡಲು ಕೂಡಲೇ ಸಂಬಂಧಿಸಿದ ರೈತರ ಸಭೆ ನಡೆಸಿ ಕ್ರಮ ವಹಿಸುವುದಾಗಿ ತಿಳಿಸಿದರು. ಕೋಚಿಮುಲ್ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ವಕೀಲ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್, ಎಸ್‍ಎಫ್‌ಸಿಎಸ್ ಉಪಾಧ್ಯಕ್ಷ ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.