ADVERTISEMENT

ವರುಣನ ಕೃಪೆಗಾಗಿ ಯಜ್ಞ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:40 IST
Last Updated 10 ಸೆಪ್ಟೆಂಬರ್ 2011, 10:40 IST

ಮಾಲೂರು: ತಾಲ್ಲೂಕಿನ ಹುಂಗೇನಹಳ್ಳಿ ಗ್ರಾಮಸ್ಥರು ವರುಣನ ಕೃಪಾಕಟಾಕ್ಷಕ್ಕಾಗಿ ಸತತ 72 ಗಂಟೆಗಳ ವರುಣ ಯಜ್ಞವನ್ನು ಶುಕ್ರವಾರ ನ್ಯಾನಲಿಂಗಾಚಾರ್ ನೇತೃತ್ವದಲ್ಲಿ ನಡೆಸಿದರು.

ತಾಲ್ಲೂಕಿನ ಹುಂಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳು 30 ವರ್ಷಗಳಿಂದ ತುಂಬದೇ ಇರುವುದರಿಂದ ಇಲ್ಲಿನ ಗ್ರಾಮಸ್ಥರು ವರುಣ ಯಾಗವನ್ನು ಶುಕ್ರವಾರ ಪ್ರಾರಂಭಿಸಿದರು. ಇಲ್ಲಿನ ರೈತರು ತಮ್ಮ ಕೃಷಿಚಟುವಟಿಕೆಗಳಿಗೆ ಮಳೆ ಮತ್ತು ಕೊಳವೆ ಬಾವಿಗಳನ್ನುಆಧಾರವಾಗಿಸಿಕೊಂಡಿದ್ದು, ಇತ್ತೀಚೆಗೆ ತಾಲ್ಲೂಕಿನಲ್ಲಿ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.
 
ಗ್ರಾಮದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ವರುಣ ಯಜ್ಞವನ್ನು ಮಾಡಲು ಹುಂಗೇನಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ತೀರ್ಮಾನಿಸಿ ಗ್ರಾಮದ ಪ್ರಮುಖರಾದ ಹೊನ್ನೆಗೌಡ, ಗ್ರಾ.ಪಂ. ಸದಸ್ಯ  ಶ್ರೀನಿನಾಥ್, ಅಶೋಕ್, ಗೋಪಿನಾಥ್, ವಿಶ್ವನಾಥಗೌಡ, ನಾರಾಯಣಗೌಡ ನೇತೃತ್ವದಲ್ಲಿ ಯಜ್ಞ ಪ್ರಾರಂಭಿಸಲಾಗಿದೆ.

3 ದಿನಗಳ ಕಾಲ ಸತತವಾಗಿ ನಡೆಯುವ ವರುಣ ಯಜ್ಞದಲ್ಲಿ 4 ಟನ್ ಸೌದೆ ಮತ್ತು 60ರಿಂದ 70 ಮೂಟೆ ಉಪ್ಪನ್ನು ಯಜ್ಞಕ್ಕೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಮರ್ಪಿಸಿದರು. ಪೂರ್ವಜರು ಅನಾದಿ ಕಾಲದಿಂದ ಮಳೆ ಕಡಿಮೆಯಾದ ಸಂದರ್ಭದಲ್ಲಿ ವರುಣ ಯಜ್ಞವನ್ನು ಆಚರಿಸಿಕೊಂಡು ಬರುತಿದ್ದಾರೆ.

ವೈಜ್ಞಾನಿಕವಾಗಿ ಉಪ್ಪನ್ನು ಸುಡುವುದರಿಂದ ಅದರಲ್ಲಿನ ಲವಣಾಂಶಗಳು ಹಾವಿ ರೂಪದಲ್ಲಿ ವಾತಾವರಣದಲ್ಲಿ  ಸೇರಿ ಮೋಡಗಳನ್ನು ಚದುರಿಸುವುದರಿಂದ ಮಳೆಯಾಗುತ್ತದೆ ಆದ್ದರಿಂದ ನಮ್ಮ ಹಿರಿಯರು ವರುಣ ಯಜ್ಞವನ್ನು ಮಳೆಯಂತ್ರ ಎಂದು ಕರೆಯುವುದು ರೂಢಿಯಲ್ಲಿದೆ ಎಂದು ಗ್ರಾಮದ ಹೊನ್ನೆಗೌಡ ತಿಳಿಸಿದರು.

ಮಾಜಿ ಶಾಸಕ ಎಚ್.ಬಿ.ದ್ಯಾವಿರಪ್ಪ, ಚಂದ್ರೇಗೌಡ, ರಾಜಶೇಖರಾಚಾರ್, ಗ್ರಾ.ಪಂ. ಸದಸ್ಯರಾದ ಅಶೋಕ್, ಶ್ರೀನಾಥ್, ಜಗನ್ನಾಥಚಾರಿ ಭೇಟಿ ನೀಡಿದ್ದರು. ಗ್ರಾಮದ ಮಹಿಳೆಯರು ಯಜ್ಞದ ಹೊಂಡಕ್ಕೆ ಪೂಜೆ ಸಲ್ಲಿಸುವ ಮೂಲಕ ಉಪ್ಪನ್ನು ಯಜ್ಞಕುಂಡದಲ್ಲಿ ಸುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.