ADVERTISEMENT

ಶಾಸಕಿ ರಾಮಕ್ಕ ವಿರುದ್ಧ ಪೊಲೀಸರಿಗೆ ದೂರು

ರಸ್ತೆ ವಿಸ್ತರಣೆಗೆ ತೆಂಗಿನ ಮರಗಳ ನಾಶ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2013, 5:54 IST
Last Updated 25 ಡಿಸೆಂಬರ್ 2013, 5:54 IST
ಕೆಜಿಎಫ್‌ ಹೊರವಲಯದ ಯರನಾಗನಹಳ್ಳಿ ಬಳಿ ಮಂಗಳವಾರ ರಸ್ತೆ ವಿಸ್ತರಣೆಗೆ ಬಲಿಯಾದ ರೈತರ ತೆಂಗಿನ ಮರಗಳು.
ಕೆಜಿಎಫ್‌ ಹೊರವಲಯದ ಯರನಾಗನಹಳ್ಳಿ ಬಳಿ ಮಂಗಳವಾರ ರಸ್ತೆ ವಿಸ್ತರಣೆಗೆ ಬಲಿಯಾದ ರೈತರ ತೆಂಗಿನ ಮರಗಳು.   

ಕೆಜಿಎಫ್‌: ನಗರ ಹೊರವಲಯದ ಯರನಾಗನಹಳ್ಳಿ–ಚೆನ್ನಪಲ್ಲಿ ನಡುವಿನ ರಸ್ತೆ ವಿಸ್ತರಣೆಗೆ ನೂರಾರು ತೆಂಗಿನ ಮರಗಳನ್ನು ರೈತರ ಅನುಮತಿ ಇಲ್ಲದೇ ಕಡಿದುಹಾಕಲಾಗಿದೆ. ರೈತರ ಜಮೀನಿ­ನಲ್ಲಿ ಬೆಳೆದಿದ್ದ ತೆಂಗಿನ ಮರಗಳನ್ನು ಜೆಸಿಬಿ ತಂದು ಅಕ್ರಮವಾಗಿ ನಾಶ ಮಾಡಲಾಗಿದೆ ಎಂಬ ಆರೋಪ ಹಿನ್ನೆಲೆ­ಯಲ್ಲಿ ಮಂಗಳವಾರ ಗ್ರಾಮದಲ್ಲಿ ಬಿಗು­ವಿನ ವಾತಾವರಣ ನಿರ್ಮಾಣ­ವಾಗಿತ್ತು.

ಯರನಾಗನಹಳ್ಳಿ ಮತ್ತು ಚೆನ್ನಪಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಎರಡೂ ಗ್ರಾಮ­ಗಳ ನಡುವೆ ಜಟಾಪಟಿ ನಡೆಯುತ್ತಿತ್ತು. ಚೆನ್ನಪಲ್ಲಿ ಗ್ರಾಮಸ್ಥರು ಕೆಜಿಎಫ್‌ ನಗ­ರಕ್ಕೆ ಬರಬೇಕಾದರೆ ಯರನಾಗನಹಳ್ಳಿ ಮೂಲಕ ಓಣಿಯಂತಹ ಸಣ್ಣ ರಸ್ತೆ­ಯನ್ನು ಬಳಸಬೇಕಾಗಿತ್ತು. ಇಲ್ಲವೆ ಕಮ್ಮ­ಸಂದ್ರದ ಮೂಲಕ ಸುತ್ತು ಬಳಸಿ ಕೆಜಿಎಫ್‌ ನಗರಕ್ಕೆ ಹೋಗಬೇಕಾಗಿತ್ತು. ಈ ಸಂಬಂಧ ಹಲವು ವರ್ಷಗಳಿಂದ ರಾಜಿ ಸೂತ್ರಗಳು ನಡೆದರೂ ಪ್ರಯೋ­ಜನ­ವಾಗಿರಲಿಲ್ಲ.

ಹೀಗಿರುವಾಗ, ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ವೈ.ರಾಮಕ್ಕ, ಮಾಜಿ ಶಾಸಕ ವೈ.ಸಂಪಂಗಿ ಚೆನ್ನಪಲ್ಲಿಯಿಂದ ಯರ­ನಾಗನ­ಹಳ್ಳಿಗೆ ರಸ್ತೆ ವಿಸ್ತರಣೆ ಮಾಡಲು ಸೂಚನೆ ನೀಡಿದರು. ಸ್ಥಳದಲ್ಲಿದ್ದ ಜೆಸಿಬಿ ಯಂತ್ರಗಳು ರಸ್ತೆಯ ಇಕ್ಕೆಲಗಳಲ್ಲಿ ಹಳ್ಳ ತೋಡಿ ರಸ್ತೆಯ ಗುರುತು ಹಾಕಿದವು. ಈ ಹಂತದಲ್ಲಿ ರೈತ ವೆಂಕಟೇಶ, ಮಾಜಿ ಶಾಸಕರ ನಡುವೆ ವಾಗ್ವಾದ ನಡೆಯಿತು.

ಮಂಗಳವಾರ ಬೆಳಿಗ್ಗೆ ರಸ್ತೆ ವಿಸ್ತರಣೆ ಕಾರ್ಯಾಚರಣೆ ಮುಂದುವರಿದಾಗ ಯರನಾಗನಹಳ್ಳಿ ನಿವಾಸಿಗಳು ಪ್ರತಿ­ಭಟನೆ ನಡೆಸಿದರು. ಕಾಮಗಾರಿಗೆ ಅಡ್ಡಿಪಡಿಸಿದರು. ಯಾವ ಯೋಜನೆ­ಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬು­ದಕ್ಕೆ ಪುರಾವೆ ಇಲ್ಲ. ಕಾಮಗಾರಿ­ಗಳನ್ನು ಇಲಾಖೆ ವತಿಯಿಂದ ಮಾಡಿ­ಸದೇ ಶಾಸಕರು ಮತ್ತು ಅವರ ಹಿಂಬಾಲಕರು ಮಾಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿ  ನಿಲ್ಲಿಸಿದರು.

ಸ್ಥಳದಲ್ಲಿ ಜಮಾಯಿಸಿದ ಎರಡೂ ಗ್ರಾಮಗಳ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಯರನಾಗನಹಳ್ಳಿ ನಿವಾಸಿಗಳು ಶಾಸಕಿ ಮತ್ತು ಮಾಜಿ ಶಾಸಕರ ವಿರುದ್ಧ ರಾಬರ್ಟಸನ್‌ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.