ADVERTISEMENT

ಹೂವು ಬಿಟ್ಟ ಹುಳಿ ಮಾವಿನ ಮರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 9:50 IST
Last Updated 14 ಫೆಬ್ರುವರಿ 2011, 9:50 IST

ಶ್ರೀನಿವಾಸಪುರ: ಈ ಬಾರಿ ತಾಲ್ಲೂಕಿನಲ್ಲಿ ನಾಟಿ ಮಾವಿನ ಮರಗಳು ಹೂಬಿಟ್ಟು ಕಂಗೊಳಿಸುತ್ತಿವೆ. ಹೂವಿನ ರಕ್ಷಣೆಗೆ ಯಾವುದೇ ಸಂರಕ್ಷಣಾ ಕ್ರಮ ಕೈಗೊಳ್ಳದಿದ್ದರೂ ಕೊಂಬೆಗಳಲ್ಲಿ ಹೂಗೊಂಚಲು ತೂಗುತ್ತಿವೆ.

ಪೂರ್ವಿಕರು ಹುಳಿ ಮಾವಿನ ಮರ ಎಂದು ಕರೆಯಲ್ಪಡುವ ದೇಸಿ ತಳಿಯ ಮಾವಿನ ಮರಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಗೂ ಗುಂಡು ತೋಪುಗಳಲ್ಲಿ ಬೆಳೆಸಿದ್ದರು. ಕಾಲಾಂತರದಲ್ಲಿ ಗುಂಡು ತೋಪುಗಳು ಮಹತ್ವ ಕಳೆದುಕೊಂಡು ಮರಗಳು ಕೊಡಲಿಗೆ ಆಹುತಿಯಾದವು. ಇನ್ನು ರಸ್ತೆ ಪಕ್ಕದಲ್ಲಿ ಎತ್ತರವಾಗಿ ಬೆಳೆದಿದ್ದ ದೈತ್ಯಾಕಾರದ ಮರಗಳು ಕಳ್ಳರ ಪಾಲಾದವು.ಆದರೂ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಇಂತಹ ಮರಗಳು ಜೀವಂತವಾಗಿವೆ.

ಸಾಮಾನ್ಯವಾಗಿ ಈ ಮರಗಳನ್ನು ಯಾರೂ ಹತ್ತಲು ಪ್ರಯತ್ನಿಸುವುದಿಲ್ಲ. ಬಿಟ್ಟ ಕಾಯಿ ಕೋತಿ, ಬಾವಲಿ, ಇಣಚಿ ಹಾಗೂ ಹಕ್ಕಿಗಳ ಪಾಲಾಗುತ್ತದೆ. ಅಪರೂಪಕ್ಕೆ ಹಣ್ಣಾದರೆ ಉದುರಿದಾಗ ಹಳ್ಳಿ ಮಕ್ಕಳ ಕೈಸೇರುತ್ತದೆ. ಹಿಂದೆ ಉಪ್ಪಿನ ಕಾಯಿಗೆ ಇದನ್ನೇ ಬಳಸಲಾಗುತ್ತಿತ್ತು. ಆದರೆ ಈಗ ಅದು ಕಡೆಗಣಿಸಲ್ಪಟ್ಟಿದೆ.

ಸಾಮಾನ್ಯವಾಗಿ ಯಾರ ಒಡೆತನಕ್ಕೂ ಸೇರದ ಈ ಮರಗಳಲ್ಲಿ ಹೂ ಬಂದಾಗ ರೋಗ ಹಾಗೂ ಕೀಟ ಬಾಧೆಯಿಂದ ರಕ್ಷಿಸಲು ಔಷಧಿ ಸಿಂಪರಣೆ ಮಾಡುವುದಿಲ್ಲ. ಆದರೂ ಅವು ತಮ್ಮ ಶಕ್ತಿಯಿಂದಲೇ ರೋಗವನ್ನು ಮೆಟ್ಟಿನಿಂತು ಫಸಲನ್ನು ಕೊಡುತ್ತವೆ. ಅಂತಹ ವಿಶೇಷ ಗುಣಗಳನ್ನು ಪಡೆದಿರುವ ಈ ಮರಗಳು ಈಗ ಹೂವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.