ಕೋಲಾರ: ವಾರದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ಕೊಳೆತು ಹೋಗುವ ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಹತಾಶರಾದ ಕೋಲಾರ ತಾಲ್ಲೂಕಿನ ರೈತರೊಬ್ಬರು ತೋಟಕ್ಕೆ ಮೇಕೆ ಮತ್ತು ಕುರಿಗಳನ್ನು ಬಿಟ್ಟು ಮೇಯಿಸಿದ್ದಾರೆ.
ಎರಡು ಎಕರೆ ತೊಟದಲ್ಲಿ ದೊಡ್ಡ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆದಿದ್ದ ಕಾಕಿನತ್ತ ಗ್ರಾಮದ ಮಂಜುನಾಥ್ ಮೇಕೆ ಹಾಗೂ ಕುರಿಗಳನ್ನು ಬಿಟ್ಟು ಮೇಯಿಸಿ, ತೋಟವನ್ನು ಸ್ವಚ್ಛಗೊಳಿಸಿದ್ದಾರೆ.
‘ಮಳೆಯಿಂದ ಗಿಡ ಹಾಗೂ ಕ್ಯಾಪ್ಸಿಕಂ ಕೊಳೆಯುತ್ತಿವೆ. ಸುಮಾರು ₹7 ಲಕ್ಷ ಬಂಡವಾಳ ಹೂಡಿದ್ದೆ. ಅದರಲ್ಲಿ ಸುಮಾರು ₹3.5 ಲಕ್ಷ ನಷ್ಟವಾಗಿದೆ’ ಎಂದು ಅವರು ಗೋಳು ತೋಡಿಕೊಂಡರು.
ಶಿಳ್ಳೆಂಗೇರಿ ಗ್ರಾಮದ ದೊಡ್ಡ ಕೆರೆ ನೀರು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಸೌತೆ, ರಾಗಿ, ಅವರೆ, ಬೆಳೆ ನಾಶವಾಗಿದೆ. ಭರತ್ ಎಂಬುವರ ನಾಲ್ಕು ಎಕರೆ ಸೌತೆಕಾಯಿ ಬೆಳೆ ನೀರುಪಾಲಾಗಿದೆ. ಸುಮಾರು ₹5 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಜಿನುಗುತ್ತಿರುವ ಮಳೆಯಿಂದಾಗಿ ತರಕಾರಿ ಹಾಗೂ ಹೂವು ಜಮೀನಿನಲ್ಲಿಯೇ ಕೊಳೆಯುತ್ತಿವೆ. ಅಲ್ಲದೇ, ಟೊಮೆಟೊಗೆ ಅಂಗಮಾರಿ ಹಾಗೂ ನೂಜಿ ಸಮಸ್ಯೆ ಕಾಣಿಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.