
ಹಣ
ಸಾಂದರ್ಭಿಕ ಚಿತ್ರ
ಕೋಲಾರ: ರೈತರು, ಮಹಿಳೆಯರ ಆರ್ಥಿಕ ಜೀವನಾಡಿಯಾಗಿರುವ ಡಿಸಿಸಿ ಬ್ಯಾಂಕ್ ಉಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೀಟರ್ ಬಡ್ಡಿ ದಂಧೆ ಬಲಗೊಳ್ಳಲು ಕಾರಣವಾಗುತ್ತದೆ ಎಂದು ತಾಲ್ಲೂಕಿನ ಕಡಗಟ್ಟೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂಘದ ಅಧ್ಯಕ್ಷ ಕೆ.ವಿ.ದಯಾನಂದ ಎಚ್ಚರಿಸಿದರು.
ಬುಧವಾರ ಸೊಸೈಟಿ ಸಭಾಂಗಣದಲ್ಲಿ ಮನೆ ನಿರ್ಮಾಣ, ಕುರಿ ಶೆಡ್ ನಿರ್ಮಾಣಕ್ಕೆ, ಹುಳು ಸಾಕಣೆ ಮನೆ, ಬೆಳೆಸಾಲದ ಸುಮಾರು ₹ 30 ಲಕ್ಷ ಸಾಲ ವಿತರಿಸಿ ಅವರು ಮಾತನಾಡಿದರು.
ಬ್ಯಾಂಕ್ ಈಗಾಗಲೇ ಗ್ರಾಹಕರಿಂದ ದೂರವಾಗಿದೆ. ನೀಡಲಾಗಿರುವ ಸಾಲ ವಸೂಲಿಯಲ್ಲಿ ಹಿಂದೆ ಉಳಿದು ಆರ್ಥಿಕ ಶಕ್ತಿ ಕಳೆದುಕೊಂಡಿದೆ ಎಂದು ದೂರಿದರು.
ಹಿಂದೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಪರಿಸ್ಥಿತಿಯಲ್ಲಿತ್ತು. ಈಗ ಆ ಶಕ್ತಿಯನ್ನು ಕಳೆದುಕೊಂಡಿದೆ. ಈ ಬಗ್ಗೆ ಮೊದಲಿನಿಂದಲೂ ಎಚ್ಚರಿಸುತ್ತಾ ಬಂದಿದ್ದರೂ ಯಾರು ಎಚ್ಚೆತ್ತುಕೊಳ್ಳಲಿಲ್ಲ ಎಂದು ಕಿಡಿಕಾರಿದರು.
ಯಾರ ಖಾತೆಯಲ್ಲಿ ಹಣ ಇದೆ ಎಂಬುದನ್ನು ಪರಿಶೀಲಿಸಿ ಗ್ರಾಹಕರ ಗಮನಕ್ಕೆ ಇಲ್ಲದೆ ಅಧಿಕಾರಿಗಳೇ ಸ್ವಯಂ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಠೇವಣಿದಾರರ ಖಾತೆಗೆ ಕನ್ನ ಹಾಕಿ, ಅನ್ನದಾತರ ಹೊಟ್ಟೆಗೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ದುರುಪಯೋಗ ಪಡಿಸಿಕೊಂಡಿರುವ ಹಣ ಮರು ಪಾವತಿ ಮಾಡಿಸಬೇಕು ಎಂದು ಒತ್ತಾಯಿಸಿದರು.
ಹಗರಣಗಳು ನಡೆಯುತ್ತಿರುವ ಬಗ್ಗೆ ಜನಪ್ರತಿನಿಧಿಗಳು, ಆಡಳಿತಾಧಿಕಾರಿಗಳ ಗಮನಕ್ಕೆ ಇದ್ದರೂ ಇಚ್ಚಾಶಕ್ತಿ ಕೊರತೆಯಿಂದ ಬ್ಯಾಂಕ್ನತ್ತ ಗಮನ ಹರಿಸುತ್ತಿಲ್ಲ. ಇನ್ನಾದರು ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಮಂಜುನಾಥ್, ಸೋಮಶೇಖರ್, ರಮೇಶ್, ಎಂ.ಬೈಯ್ಯಣ್ಣ, ಬಿ.ಎಂ.ರಾಮೇಗೌಡ, ಕುಮಾರಚಾರಿ, ಮುನಿಕೃಷ್ಣಪ್ಪ, ಸುರೇಶ್, ಸಿ.ಡಿ.ರಾಮಚಂದ್ರೇಗೌಡ, ಗೋಪಾಲಕೃಷ್ಣ, ರಾಜಣ್ಣ, ಸಿಇಒ ಮುನೀಶ್ವರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.