ಕೋಲಾರ: ‘ಮಹಿಳಾ ಸ್ವಸಹಾಯ ಸಂಘಗಳು ಸಾಲಕ್ಕಾಗಿ ಅಲ್ಲ, ಉತ್ತಮ ಬದುಕು ರೂಪಿಸಿಕೊಳ್ಳಲಿಕ್ಕಾಗಿ ಎಂಬುದನ್ನು ಅರಿತು ಸಂಘಟಿತರಾಗಿ ಸಾಲ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಲಹೆ ನೀಡಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಗುರುವಾರ ವಿವಿಧ ಬಡಾವಣೆಗಳ ೨೧ ಮಹಿಳಾ ಸ್ವಸಹಾಯ ಸಂಘಗಳಿಗೆ ₨ ೧.೫ ಕೋಟಿ ಶೂನ್ಯ ಬಡ್ಡಿ ಸಾಲ ವಿತರಿಸಿ ಮಾತನಾಡಿ, ‘ಬ್ಯಾಂಕ್ನಿಂದ ಪಡೆದುಕೊಂಡಿರುವ ಸಾಲದಿಂದ ಸ್ವಾವಲಂಬಿ ಬದುಕು ರೂಪಿಸಿಕೊಂಡರೆ ಅರ್ಥ ಸಿಗುತ್ತದೆ’ ಎಂದರು.
‘ಗ್ರಾಮ, ನಗರಗಳಲ್ಲಿ ಕೇವಲ ಬ್ಯಾಂಕ್ ಸಾಲ ಪಡೆಯಲು ಮಾತ್ರ ಸಂಘ ರಚಿಸಿಕೊಂಡು ಸಂಘಟಿತರಾಗದಿರಿ, ನಿಮ್ಮ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅಗತ್ಯವಾದ ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸುವತ್ತ ಚಿಂತನೆ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.
‘ಬ್ಯಾಂಕ್ ಸಮಾಜದ ಪ್ರತಿ ತಾಯಂದಿರಿಗೂ ಸಾಲ ಸೌಲಭ್ಯ ಒದಗಿಸುವ ಸಂಕಲ್ಪ ಮಾಡಿದೆ. ಹೆಣ್ಣು ಮಕ್ಕಳು ತಮ್ಮ ಬದುಕು ಹಸನಾಗಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯ ನೆರವು ಒದಗಿಸಲು ಸಿದ್ದವಿದೆ’ ಎಂದು ತಿಳಿಸಿದರು.
ನಿರ್ದೇಶಕ ನೀಲಕಂಠೇಗೌಡ ಮಾತನಾಡಿ, ‘ಕೆಲ ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಹೆಸರೇ ಮಾಯವಾಗಿತ್ತು, ಈಗ ಪ್ರತಿ ತಾಯಂದಿರ ಬಾಯಲ್ಲೂ ಬ್ಯಾಂಕಿನ ಹೆಸರು ಕೇಳಿ ಬರುತ್ತಿದೆ. ಈ ಮಟ್ಟಕ್ಕೆ ಬಡ ಮಹಿಳೆಯರಿಗೆ ಇಲ್ಲಿ ಸಹಾಯ ಸಿಗುತ್ತದೆ ಎಂದು ನಂಬಿಯೇ ಇರಲಿಲ್ಲ, ಇದೀಗ ಖುಷಿಯಾಗುತ್ತಿದೆ’ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ಕುಮಾರ್ ಮಾತನಾಡಿ, ‘ಎರಡೂ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ಬ್ಯಾಂಕ್ ಸಾಲ ನೀಡುವ ಶಕ್ತಿ ಪಡೆದುಕೊಂಡಿದೆ. ತಾಯಂದಿರು ಯಾರದ್ದೇ ಶಿಫಾರಸ್ಸು ತರುವ ಅಗತ್ಯವಿಲ್ಲ, ನಿಯನಾನುಸಾರ ಬ್ಯಾಂಕಿನಲ್ಲಿ ನಿಮ್ಮ ಸಂಘದ ಠೇವಣಿ ಇಟ್ಟಿದ್ದರೆ ನಿಗಧಿತ ಅವಧಿಯಲ್ಲಿ ಸಾಲ ಮಂಜೂರಾಗುತ್ತದೆ’ ಎಂದು ಹೇಳಿದರು.
ನಿರ್ದೇಶಕರಾದ ಸೋಮಣ್ಣ, ಸೊಣ್ಣೇಗೌಡ, ನಾರಾಯಣರೆಡ್ಡಿ, ಕೆ.ವಿ.ದಯಾನಂದ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ರಮೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.