ಕೋಲಾರ: ಜಿಲ್ಲೆಯ ಗುತ್ತಿಗೆ ಆಯುಷ್ ವೈದ್ಯರ ವೇತನ ತಾರತಮ್ಯ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಪದಾಧಿಕಾರಿಗಳು ಇಲ್ಲಿ ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
‘ಸರ್ಕಾರವು ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಅಲೋಪತಿ ವೈದ್ಯರ ವೇತನ ಹೆಚ್ಚಳ ಮಾಡಿದೆ. ಆದರೆ, ಆಯುಷ್ ವೈದ್ಯರ ವೇತನ ಹೆಚ್ಚಳಕ್ಕೆ ಮೀನಮೇಷ ಎಣಿಸುತ್ತಿದೆ. ಈ ಸಂಬಂಧ ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ಸಂಘಟನೆ ಸದಸ್ಯರು ಅಳಲು ತೋಡಿಕೊಂಡರು.
‘ಆಯುಷ್ ವೈದ್ಯರಿಗೆ ಕೊಡುತ್ತಿರುವ ವೇತನ ತುಂಬಾ ಕಡಿಮೆಯಿದೆ. ವೇತನ ಜೀವನ ನಿರ್ವಹಣೆಗೂ ಸಾಲುತ್ತಿಲ್ಲ. ವೈದ್ಯರು ಸುಮಾರು 14 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಸೇವಾ ಭದ್ರತೆ ಇಲ್ಲವಾಗಿದೆ. ಸರ್ಕಾರ ಆಯುಷ್ ವೈದ್ಯರನ್ನು ನಿರ್ಲಕ್ಷಿಸಿದೆ’ ಎಂದು ಸಂಘಟನೆ ಸದಸ್ಯ ಡಾ.ರಾಜೇಂದ್ರ ಮೌನಿ ಹೇಳಿದರು.
‘ಅಲೋಪತಿ ವೈದ್ಯರ ವೇತನ ಹೆಚ್ಚಿಸಿದ ಮಾದರಿಯಲ್ಲೇ ಆಯುಷ್ ವೈದ್ಯರ ವೇತನ ಹೆಚ್ಚಳ ಮಾಡಬೇಕು. ವೈದ್ಯರ ಗ್ರಾಮಾಂತರ ಪ್ರದೇಶದ ಸೇವೆ ಪರಿಗಣಿಸಿ ಕೆಲಸ ಕಾಯಂಗೊಳಿಸಬೇಕು. ಈ ಬೇಡಿಕೆ ಈಡೇರಿಸದಿದ್ದರೆ ರಾಜ್ಯದ ಸುಮಾರು 2 ಸಾವಿರ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ’ ಎಂದು ಸಂಘಟನೆ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಸಂಘಟನೆ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ವೆಂಕಟಾಚಲ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.