ಬಂಗಾರಪೇಟೆ: ಬೂದಿಕೋಟೆ ಗ್ರಾಮದಲ್ಲಿ ಸೋಮವಾರ ಎತ್ತಿನ ಹುಟ್ಟುಹಬ್ಬವನ್ನು ಇಡೀ ಗ್ರಾಮಸ್ಥರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ರೈತ ಮಂಜುನಾಥ, ಆರು ವರ್ಷಗಳ ಹಿಂದೆ ಡಿಸೆಂಬರ್ 16 ರಂದು ಕರುವೊಂದನ್ನು ಖರೀದಿಸಲಾಗಿತ್ತು. ಆ ಕರುವಿಗೆ ವಾಯುಪುತ್ರ ಎಂದು ನಾಮಕರಣ ಮಾಡಲಾಗಿದೆ. ಪ್ರತಿ ವರ್ಷ ಡಿಸೆಂಬರ್ 16ರಂದು ಆ ಎತ್ತಿನ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಅದೇ ರೀತಿ ಸೋಮವಾರವೂ ಎತ್ತಿಗೆ ಸಿಂಗಾರ ಮಾಡಿ, ಬರ್ತ್ಡೇ ಆಚರಿಸಲಾಯಿತು. ಜೊತೆಗೆ ಗ್ರಾಮಸ್ಥರೆಲ್ಲರಿಗೂ ಊಟ ಹಾಕಿ, ಸಂಭ್ರಮಿಸಲಾಯಿತು.
‘ವಾಯುಪುತ್ರ’ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ನಡೆಯುವ ರಾಸುಗಳ ಓಟದಲ್ಲಿ ಪಾಲ್ಗೊಂಡು ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ರೈತರಾದ ನಾವು ಮನೆಗೊಂದು ನಾಟಿ ತಳಿಯ ಎತ್ತು ಅಥವಾ ಹಸು ಸಾಕಬೇಕಿದೆ. ಈ ಮೂಲಕ ಅದರ ಸಂತತಿ ಉಳಿಸಬೇಕು. ರಾಜ್ಯದ ಹಾವೇರಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಓಟ ನಡೆಸಲಾಗುತ್ತಿದೆ. ಆದರೆ ನಮ್ಮ ಕೋಲಾರ ಜಿಲ್ಲೆಯಲ್ಲಿ ಅದಕ್ಕೆ ಅವಕಾಶ ಕಲ್ಪಿಸದ ಕಾರಣ ಅಂಥ ಸಾಹಸ ಮಾಡುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.