
ಬಂಗಾರಪೇಟೆ: ‘ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ಬೀಗುತ್ತಿದ್ದ, ಏಳು ಬಾರಿ ಸಂಸದರಾಗಿದ್ದವರನ್ನೇ ಮನೆಗೆ ಕಳುಹಿಸಿದ ನಮಗೆ ಕೇವಲ ಮೂರು ಬಾರಿ ಗೆದ್ದವರನ್ನು ಎದುರಿಸುವುದು ಕಷ್ಟದ ಕೆಲಸವಲ್ಲ‘ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ವಿರುದ್ಧ ಮಾಜಿ ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದರು.
ನಗರದ ಗಂಗಮ್ಮನಪಾಳ್ಯದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾರಿಯಮ್ಮ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದರು. ‘ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕೆ.ಎಚ್ ಮುನಿಯಪ್ಪ ಅವರನ್ನೇ ಸೋಲಿಸಿ ಮನೆಗೆ ಕಳುಹಿಸಿದ ಇತಿಹಾಸ ಇದೆ. ಅಂತಹ ಅಜೇಯ ನಾಯಕನನ್ನೇ ಮಣಿಸಿದ ನಮಗೆ ಕೇವಲ ಮೂರು ಬಾರಿ ಗೆದ್ದವರನ್ನು ಎದುರಿಸುವುದು ದೊಡ್ಡ ಕೆಲಸವಲ್ಲ’ ಎಂದು ಸವಾಲು ಹಾಕಿದರು.
ಚುನಾವಣೆ ಎಂಬುದು ಕೇವಲ ಐದು ವರ್ಷಕ್ಕೊಮ್ಮೆ ಬರುವ ಪ್ರಕ್ರಿಯೆ. ಆದರೆ, ಅಭಿವೃದ್ಧಿ ಎಂಬುದು ನಿರಂತರವಾಗಿ ನಡೆಯಬೇಕಾದ ಕೆಲಸ. ರಾಜಕೀಯಕ್ಕಾಗಿ ಅಭಿವೃದ್ಧಿ ಆಗುವ ಬದಲು ಅಭಿವೃದ್ಧಿಗಾಗಿ ರಾಜಕೀಯ ಎಂಬ ವಾತಾವರಣ ನಿರ್ಮಾಣವಾಗಬೇಕು ಎಂದರು.
ಚುನಾವಣೆ ಮುಗಿದ ಮೇಲೆ ಗೆದ್ದವರು ಕೇವಲ ಒಂದು ಪಕ್ಷದ ಪ್ರತಿನಿಧಿಯಾಗಿರುವುದಿಲ್ಲ. ಬದಲಾಗಿ ಆ ಕ್ಷೇತ್ರ ಅಥವಾ ದೇಶದ ಎಲ್ಲ ಜನರ ಪ್ರತಿನಿಧಿಯಾಗಿರುತ್ತಾರೆ. ಅಭಿವೃದ್ಧಿ ಕೆಲಸ ಜಾತಿ, ಮತ ಅಥವಾ ಪಕ್ಷದ ಆಧಾರದ ಮೇಲೆ ನಡೆಯಬಾರದು. ಅಭಿವೃದ್ಧಿ ಯೋಜನೆಗಳಲ್ಲಿ ರಾಜಕೀಯ ಬೆರೆತಾಗ ಕೇವಲ ಮತಬ್ಯಾಂಕ್ ಇರುವ ಕಡೆ ಮಾತ್ರ ಕೆಲಸ ನಡೆಯುವ ಸಾಧ್ಯತೆ ಇರುತ್ತದೆ ಎಂದರು.
ಪುರಸಭೆ ಸದಸ್ಯರಾದ ಕಪಾಲಿ ಶಂಕರ್, ಚಲಪತಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.