
ಕೋಲಾರ: ಕೋಲಾರದ ಚಿನ್ನದ ನಾಡು ಬ್ಯಾಸ್ಕೆಟ್ಬಾಲ್ ತಂಡ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಈಚೆಗೆ ನಡೆದ ಬೆಂಗಳೂರು ಗ್ರಾಮೀಣ ವಿಭಾಗದ ಬ್ಯಾಸ್ಕೆಟ್ಬಾಲ್ ಲೀಗ್ ಚಾಂಪಿಯನ್ಷಿಪ್ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಬ್ಯಾಸ್ಕೆಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಚಾಂಪಿಯನ್ಷಿಪ್ ಎರಡು ದಿನ ನಡೆಯಿತು.,
ಗೌರಿಬಿದನೂರಿನ ಪಿನಾಕಿನಿ ಬ್ಯಾಸ್ಕೆಟ್ಬಾಲ್ ತಂಡ ಪ್ರಥಮ ಸ್ಥಾನ ಪಡೆಯಿತು. ದಾವಣಗೆರೆಯ ತಂಡವು ತೃತೀಯ ಸ್ಥಾನ ಗಳಿಸಿತು.
ಅಂತಿಮ ಪಂದ ಪಿನಾಕಿನಿ ಮತ್ತು ಚಿನ್ನದ ನಾಡು ನಡುವೆ ನಡೆಯಿತು. ಪಿನಾಕಿನಿ ತಂಡ 68–59 ಪಾಯಿಂಟ್ಗಳಿಂದ ಚಿನ್ನದ ನಾಡು ತಂಡವನ್ನು ಮಣಿಸಿತು. ಮಧ್ಯಂತರ ಅವಧಿಯಲ್ಲಿ 40-28 ಪಾಯಿಂಟ್ ಇತ್ತು.
ಉತ್ತಮ ಆಟವಾಡಿದ ಪಿನಾಕಿನಿ ತಂಡದ ಪವನ್ 25 ಪಾಯಿಂಟ್, ವೇಣುಗೋಪಾಲ್ 21 ಪಾಯಿಂಟ್ ಗಳಿಸಿದರು. ಚಿನ್ನದ ನಾಡು ತಂಡದ ಯಶ್ವಂತ್ 18 ಮತ್ತು ತರುಣ್ 11 ಪಾಯಿಂಟ್ ಪಡೆದರು.
ಇದಕ್ಕೂ ಮೊದಲು ಪಿನಾಕಿಯ ತಂಡ 73– 60 ಪಾಯಿಂಟ್ಗಳಿಂದ ದಾವಣಗೆರೆ ತಂಡವನ್ನು ಸೋಲಿಸಿತ್ತು. ಚಿನ್ನದ ನಾಡು ತಂಡ 53–29 ಪಾಯಿಂಟ್ಗಳಿಂದ ದಾವಣಗೆರೆ ತಂಡವನ್ನು ಮಣಿಸಿತ್ತು.
ಈ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ಬ್ಯಾಸ್ಕೆಟ್ಬಾಲ್ ಕ್ಲಬ್, ಕೆಜಿಎಫ್, ಶ್ರೀದೇವರಾಜ ಅರಸು ಬ್ಯಾಸ್ಕೆಟ್ಬಾಲ್ ಕ್ಲಬ್, ಕೋಲಾರ ವೈಎಸ್ಬಿಸಿ, ಚಿಕ್ಕಬಳ್ಳಾಪುರ ಬ್ಯಾಸ್ಕೆಟ್ಬಾಲ್ ಕ್ಲಬ್, ನ್ಯೂವೇ ಆಫ್ ಲೈಫ್ ಬ್ಯಾಸ್ಕೆಟ್ಬಾಲ್ ಕ್ಲಬ್ ತಂಡಗಳು ಬಾಗವಹಿಸಿದ್ದವು.
ಚಿನ್ನದ ನಾಡು ಬ್ಯಾಸ್ಕೆಟ್ಬಾಲ್ ಕ್ಲಬ್ ಬೆಂಗಳೂರಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಜ್ಯ ಮಟ್ಟದ ಬ್ಯಾಸ್ಕೆಟ್ಬಾಲ್ ಟೂರ್ನಿಗೆ ಆಯ್ಕೆಯಾಗಿರುವುದಕ್ಕೆ ತಂಡದ ಗೌರವಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.