ADVERTISEMENT

ಮಠ–ಮಂದಿರದಲ್ಲಿ ಭಜನೆ ಎಚ್ಚರಿಕೆ: ಅರುಣ್‌ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 6 ಮೇ 2022, 10:26 IST
Last Updated 6 ಮೇ 2022, 10:26 IST

ಕೋಲಾರ: ಅನಧಿಕೃತ ಧ್ವನಿವರ್ಧಕ ಬಳಕೆ ಸೇರಿದಂತೆ ಶಬ್ಧಮಾಲಿನ್ಯ ತಡೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳದ ಕಾರಣ ಜಿಲ್ಲೆಯ ಎಲ್ಲಾ ಮಠ-ಮಂದಿರಗಳಲ್ಲಿ ಧ್ವನಿವರ್ಧಕದ ಮೂಲಕ ಭಜನೆ, ಮಂತ್ರ, ವಚನ ನುಡಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್‌ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಧಿಕೃತ ಧ್ವನಿವರ್ಧಕ ಬಳಕೆ ಹಾಗೂ ಶಬ್ಧಮಾಲಿನ್ಯ ತಡೆಯುವಂತೆ ನ್ಯಾಯಾಲಯ ಆದೇಶಿಸಿದೆ. ಆದರೆ, ಜಿಲ್ಲೆಯಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ಖಂಡನೀಯ. ಈ ಸಂಬಂಧ ಜಿಲ್ಲಾಧಿಕಾರಿಗೆ ಈಗಾಗಲೇ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಶಬ್ಧಮಾಲಿನ್ಯ ತಡೆಯುವಂತೆ ಮತ್ತು ಧ್ವನಿವರ್ಧಕಗಳ ಬಳಕೆ ನಿಷೇಧ ಮಾಡುವಂತೆ ಕೋರಿ 2021ರ ಅ.7ರಂದು ತಹಶೀಲ್ದಾರ್‌ಗೆ ಮತ್ತು 2021ರ ಅ.21ರಂದು ಹಿರಿಯ ಪರಿಸರ ಅಧಿಕಾರಿಗೆ ಸಂಘಟನೆಯಿಂದ ಮನವಿ ಕೊಟ್ಟಿದ್ದೆವು. ಆದರೆ. ಜಿಲ್ಲಾಡಳಿತ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವುದು ನ್ಯಾಯಾಂಗ ನಿಂದನೆ ಹಾಗೂ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಜನರ ನೆಮ್ಮದಿಗಾಗಿ, ವಿದ್ಯಾರ್ಥಿಗಳ, ಕಾರ್ಮಿಕರ, ರೋಗಿಗಳ, ವೃದ್ಧರ ಹಕ್ಕು ರಕ್ಷಣೆಯು ನ್ಯಾಯಾಲಯದ ಆಶಯವಾಗಿದ್ದು, ಜಿಲ್ಲಾಡಳಿತ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದರೆ ರಾಜ್ಯ ಸಮಿತಿ ನಿರ್ಣಯದಂತೆ ಜಿಲ್ಲೆಯ ಮಠ, ಮಂದಿರಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದ ಸಂಜೆ 6ರವರೆಗೆ ಧ್ವನಿವರ್ಧಕದ ಮೂಲಕ ಭಜನೆ, ಮಂತ್ರ, ವಚನ ಪಠಿಸುತ್ತೇವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.