
ಕೋಲಾರ: ‘ರಾಜ್ಯ ಕಾಂಗ್ರೆಸ್ ಸರ್ಕಾರ ಬಿಹಾರ ಚುನಾವಣೆಗೆ ₹ 300 ಕೋಟಿಯಲ್ಲ ₹ 3 ಸಾವಿರ ಕೋಟಿ ಕೊಟ್ಟರೂ ಅಲ್ಲಿ ಇಂಡಿಯಾ ಕೂಟ ಅಧಿಕಾರಕ್ಕೆ ಬರಲ್ಲ. ರಾಜ್ಯದ ಜನರಿಗೆ ಮೋಸ ಮಾಡಿ, ಭ್ರಷ್ಟಾಚಾರ ನಡೆಸಿ ಜನರ ದುಡ್ಡು ಚುನಾವಣೆಗೆ ಬಳಸಿದರೆ ಅಲ್ಲಿ ಯಾರೂ ಮತ ನೀಡುವುದಿಲ್ಲ’ ಎಂದು ಮಾಜಿ ಸಂಸದ ಬಿಜೆಪಿ ಎಸ್.ಮುನಿಸ್ವಾಮಿ ಆರೋಪಿಸಿದರು.
ಬಿಹಾರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮರಳಿರುವ ಅವರು ಮಂಗಳವಾರ ನಗರದಲ್ಲಿ ನಡೆದ ಏಕತಾ ನಡಿಗೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಹಾರದ ಜನತೆ ಎನ್ಡಿಎಗೆ ಮತ ನೀಡಲು ನಿರ್ಧರಿಸಿದ್ದಾರೆ. ಇಂಡಿಯಾ ಕೂಟಕ್ಕೆ ಮತ ಕೊಟ್ಟರೆ ಬಿಹಾರದ ಅಭಿವೃದ್ಧಿ 30 ವರ್ಷ ಹಿಂದಕ್ಕೆ ಹೋಗುತ್ತದೆ ಎಂಬ ಭಯ ಅಲ್ಲಿನ ಮತದಾರರಲ್ಲಿದೆ ಎಂದರು.
ತೇಜಸ್ವಿ ಯಾದವ್, ರಾಹುಲ್ ಗಾಂಧಿ ತಂಡ ಹಿಂದೆ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ತೇಜಸ್ವಿ ಅವರ ತಂದೆ ಲಲ್ಲೂ ಪ್ರಸಾದ್ ಯಾದವ್ ಅಧಿಕಾರದಲ್ಲಿದ್ದಾಗ ಕೇಂದ್ರದಿಂದ ₹ 1 ಹೋದರೆ 85 ಪೈಸೆ ಮಧ್ಯವರ್ತಿಗಳ ಪಾಲಾಗುತ್ತಿತ್ತು. ನಿತೀಶ್ ಕುಮಾರ್, ಚಿರಾಗ್ ಪಾಸ್ವಾನ್ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದ ನಂತರ ಕೇಂದ್ರ ನೀಡುವ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಸೇರುತ್ತಿದೆ ಎಂದು ನುಡಿದರು.
ಬಿಹಾರದ ಯುವಕರು ಉದ್ಯೋಗವಿಲ್ಲದೇ ಹೆತ್ತವರನ್ನು ಬಿಟ್ಟು ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಉದ್ಯೋಗ ಸೃಷ್ಟಿಗೆ ಬಿಜೆಪಿ ಸಂಕಲ್ಪ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದ್ದು, ನಿರುದ್ಯೋಗ ಸಮಸ್ಯೆ ನೀಗಿಸುವತ್ತ ದಾಪುಗಾಲು ಇಟ್ಟಿದೆ ಎಂದರು.
ಡಿ.ಕೆ.ಶಿವಕುಮಾರ್ ಐದು ದಿನ ಅಲ್ಲ 10 ದಿನ ರಜೆ ಕೊಟ್ಟು ರಾಜ್ಯದಲ್ಲಿರುವ ಬಿಹಾರದ ಜನರನ್ನು ವೋಟು ಹಾಕಲು ಕಳುಹಿಸಿದರೂ ಅಲ್ಲಿನ ಜನ ಹೋಗಿ ಬಿಜೆಪಿಗೆ ಮತ ಹಾಕುತ್ತಾರೆ. ಡಿಕೆಶಿ ಹೋಗಿ ಪ್ರಚಾರ ಮಾಡಿದರೂ ಯಾವ ಪ್ರಯೋಜನವೂ ಇಲ್ಲ. ಐದಾರು ಸಾವಿರ ಬಸ್ ಚಾರ್ಜ್ ಖರ್ಚು ಮಾಡಿಕೊಂಡು ಬಿಹಾರಕ್ಕೆ ಹೋಗಿ ಮತ ಹಾಕಲು ಬಡಪಾಯಿ ಕಾರ್ಮಿಕರಿಗೆ ಹಣ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.
ಬಿಹಾರದಲ್ಲಿನ ಚುನಾವಣಾ ಪ್ರಚಾರಕ್ಕೆ ತಮ್ಮನ್ನು ಕರೆದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಅಲ್ಲಿಗೆ ಹೋಗಿ ಪ್ರಚಾರ ಮಾಡಿದರೆ ಬರುವ ವೋಟು ಬರಲ್ಲ ಎಂಬ ಕಾರಣ ದೂರವಿಟ್ಟಿದ್ದಾರೆ’ ಎಂದು ಲೇವಡಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.