ADVERTISEMENT

ಮನುಷ್ಯನ ಜೀವನ ಶೈಲಿ ಜೀವರಾಶಿಗೆ ಕಂಟಕ-ಗೋ.ನಾ.ಸ್ವಾಮಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:31 IST
Last Updated 16 ಮಾರ್ಚ್ 2022, 16:31 IST
ಕಲಾವಿದ ಗೋ.ನಾ.ಸ್ವಾಮಿ ಮತ್ತು ತಂಡದವರು ಕೋಲಾರದಲ್ಲಿ ಬುಧವಾರ ಜನಪದ ಜಾಗೃತಿ ಗೀತೆಗಳ ಮೂಲಕ ವಾಯು ಮಾಲಿನ್ಯ ತಡೆ ಕುರಿತು ಜಾಗೃತಿ ಮೂಡಿಸಿದರು
ಕಲಾವಿದ ಗೋ.ನಾ.ಸ್ವಾಮಿ ಮತ್ತು ತಂಡದವರು ಕೋಲಾರದಲ್ಲಿ ಬುಧವಾರ ಜನಪದ ಜಾಗೃತಿ ಗೀತೆಗಳ ಮೂಲಕ ವಾಯು ಮಾಲಿನ್ಯ ತಡೆ ಕುರಿತು ಜಾಗೃತಿ ಮೂಡಿಸಿದರು   

ಕೋಲಾರ: ‘ಪರಿಸರವನ್ನು ವಾಯು ಮಾಲಿನ್ಯದಿಂದ ಕಾಪಾಡಿಕೊಳ್ಳುವ ಮೂಲಕ ಮುಂದಿನ ಪೀಳಿಗೆಯನ್ನು ನಾವೇ ರಕ್ಷಿಸಿಕೊಳ್ಳಬೇಕಾದ ದುಸ್ಥಿತಿ ಬಂದಿದೆ’ ಎಂದು ಕಲಾವಿದ ಗೋ.ನಾ.ಸ್ವಾಮಿ ಕಳವಳ ವ್ಯಕ್ತಪಡಿಸಿದರು.

ವಾಯುಮಾಲಿನ್ಯ ತಡೆಗಾಗಿ ನಗರದ ವಿವಿಧೆಡೆ ಬುಧವಾರ ನಡೆದ ಜನಪದ ಗೀತಗಾಯನ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ‘ಅತಿಯಾಗಿ ಪ್ಲಾಸ್ಟಿಕ್ ಬಳಕೆಯಿಂದ ಮನುಕುಲದ ಭೂಮಿ ಮೇಲಿನ ಸಕಲ ಜೀವರಾಶಿಗೂ ಅಪಾಯವಾಗುತ್ತಿದೆ. ಮನುಷ್ಯನ ಜೀವನ ಶೈಲಿಯಿಂದ ಜೀವರಾಶಿಗೆ ಕಂಟಕ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರತಿ ಜೀವರಾಶಿಗೂ ಉಸಿರಾಡಲು ಗಾಳಿ ಮುಖ್ಯವಾಗಿದೆ. ಪರಿಸರ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿ. ಪರಿಸರ ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸರ್ವ ನಾಶವಾಗಲಿದೆ. ಪರಿಸರ ರಕ್ಷಣೆ ಎಂದರೆ ನಮ್ಮ ರಕ್ಷಣೆ ಎಂದು ಅರ್ಥ ಮಾಡಿಕೊಳ್ಳಬೇಕು. ಗಿಡ ಮರ ಹೆಚ್ಚಾಗಿ ಬೆಳೆಸಬೇಕು. ವಿದ್ಯುತ್ ಚಾಲಿತ ವಾಹನಗಳನ್ನು ಬಳಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಪರಿಸರ ಮಾಲಿನ್ಯದಿಂದ ಆಗುವ ಅಪಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ವಾಹನಗಳು ಹೊರ ಸೂಸುವ ವಿಷಕಾರಿ ಹೊಗೆಯಿಂದ ಪರಿಸರ ನಾಶವಾಗುತ್ತಿದೆ. ವಾಯು ಮಾಲಿನ್ಯದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ಮುಂದಿನ ಪೀಳಿಗೆಯು ಜನ ಶಾಪ ಹಾಕುತ್ತದೆ. ಆದ್ದರಿಂದ ಈ ಕ್ಷಣದಿಂದಲೇ ಪರಿಸರ ಉಳಿಸಬೇಕು’ ಎಂದು ತಿಳಿಸಿದರು.

ಜನಪದ ಜಾಗೃತಿ ಗೀತೆಗಳ ಮೂಲಕ ವಾಯು ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೇಶವಪ್ಪ, ಕೆಜಿಎಫ್ ಪ್ರಾದೇಶಿಕ ಅಧಿಕಾರಿ ನಯಾಜ್ ಪಾಷಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.