ಕೋಲಾರ: ‘ಸಮ್ಮಿಶ್ರ ಸರ್ಕಾರ ಈಗ ಬೀಳುತ್ತೆ, ಆಗ ಬೀಳುತ್ತೆ ಎಂದು ಭ್ರಮ ನಿರಸನ ಹೇಳಿಕೆಗಳನ್ನು ಬಿಜೆಪಿ ನೀಡುತ್ತಾ ಹಗಲುಕನಸು ಕಾಣುತ್ತಿರಲಿ’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಲೇವಡಿ ಮಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಲೋಕಸಭೆ ಚುನಾವಣೆ ಸಮೀಪಿಸಿದ್ದು, ಬಿಜೆಪಿಯವರಿಗೆ ಬೇರೆ ವಿಚಾರ ಸಿಕ್ಕಿಲ್ಲ. ಅದಕ್ಕಾಗಿ ಪದೇ ಪದೇ ಮೈತ್ರಿ ಸರ್ಕಾರ ಬೀಳು ಬೀಳುತ್ತೆ ಎಂದು ಹೇಳುತ್ತಿದ್ದಾರೆ. ಅವರಿಗೆ ಇದಕ್ಕಿಂತ ಬೇರೆ ಕೆಲಸ ಇನ್ನೇನು ಇದೆ’ ಎಂದರು.
‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಪಿತೂರಿಯಿಂದ ಯಾರಿಂದಲೂ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಸರ್ಕಾರ ಬೀಳುತ್ತೆ ಎಂಬ ಭ್ರಮೆಯಲ್ಲಿ ಬಿಕೆಪಿ ನಾಯಕರಿದ್ದಾರೆ’ ಎಂದು ಹೇಳಿದರು.
’ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಹಕಾರದಿಂದ ರಾಜ್ಯದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ 5 ವರ್ಷಗಳ ಕಾಲ ಅಧಿಕಾರ ಅವಧಿಯನ್ನು ಪೂರೈಸುತ್ತದೆ’ ಎಂದರು.
‘ರಾಜ್ಯದ ಮೈತ್ರಿ ಸರ್ಕಾರದಲ್ಲಿನ ಯಾವ ಸಚಿವರಿಗೂ ಇಡಿ, ಸಿಬಿಐ ಭಯವಿಲ್ಲ. ಕಾನೂನು ಬಾಹಿರವಾಗಿ ಯಾರು ವ್ಯವಹಾರ ಮಾಡಿದ್ದರೆ ಅವರಿಗೆ ತನಿಖಾ ಸಂಸ್ಥೆಗಳ ಬಗ್ಗೆ ಭಯ ಇರುತ್ತದೆ. ಹೀಗಾಗಿ ನಮ್ಮ ಸರ್ಕಾರ ಯಾವುದೇ ಸಚಿವರಿಗೆ ಭಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಸಹಕಾರ ಕ್ಷೇತ್ರದಲ್ಲಿ ಬಡವರ ಬಂದು, ಕಾಯಕ, ಸಾಲಮನ್ನಾ, ಋಣಮುಕ್ತ ಕಾಯಿದೆ ಇದೆ. ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಗುರಿಹೊಂದಲಾಗಿದೆ. ಸಹಕಾರ ಇಲಾಖೆಯ ₨ 9,448 ಕೋಟಿರೂಗಳ ಸಾಲಮನ್ನಾ ಮಾಡಲಾಗುವುದು’ ಎಂದು ತಿಳಿಸಿದರು.
‘ಸೆ.10ರ ಭಾರತ್ ಬಂದ್ಗೆ ತಮ್ಮ ಬೆಂಬಲ ಇದೆ. ಸಾಂಕೇತಿಕ ಪ್ರತಿಭಟನೆ, ಮೆರವಣಿಗೆ ಮಾಡಲಾಗುವುದು. ಕೇಂದ್ರ ಸರ್ಕಾರ ತೈಲೆ ಬೆಲೆ ಏರಿಕೆ ಮಾಡಿರುವುದು ಪ್ರತಿಯೊಬ್ಬರಿಗೂ ತೊಂದರೆಯಾಗುತ್ತಿದ್ದು, ಬಂದ್ನಿಂದ ಬೆಲೆ ಕಡಿಮೆ ಮಾಡದಿದ್ದರೆ ಇದರ ಪರಿಣಾಮ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.