ADVERTISEMENT

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 16:39 IST
Last Updated 3 ಫೆಬ್ರುವರಿ 2021, 16:39 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ದಾನವತ್ ಕೊಟ್ರೇಶ್ ಅವರನ್ನು ಸನ್ಮಾನಿಸಲಾಯಿತು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ದಾನವತ್ ಕೊಟ್ರೇಶ್ ಅವರನ್ನು ಸನ್ಮಾನಿಸಲಾಯಿತು.   

ಕೋಲಾರ: ‘ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ನಂಬಿಕೆ ಉಳಿಸಿಕೊಳ್ಳಿ. ಸಾಲದ ಸದ್ಬಳಕೆಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ’ ಎಂದು ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ದಾನವತ್ ಕೊಟ್ರೇಶ್ ಕಿವಿಮಾತು ಹೇಳಿದರು.


ಆರ್ಥಿಕ ಸಾಕ್ಷರತಾ ಕೇಂದ್ರ ಹಾಗೂ ದಾನ್ ಪ್ರತಿಷ್ಠಾನದ ಸಹಯೋಗದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಮಹಿಳೆಯರಿಗೆ ಬುಧವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಾಲ ಮರುಪಾವತಿಯಲ್ಲಿ ಮಹಿಳೆಯರು ಪ್ರಾಮಾಣಿಕರಾಗಿದ್ದಾರೆ. ಸ್ವಸಹಾಯ ಸಂಘ ರಚಿಸಿಕೊಂಡು ವಾರದ ಸಭೆ ನಡೆಸುವ ಮೂಲಕ ಸಾಲ ಮರುಪಾವತಿ ಜತೆಗೆ ಉಳಿತಾಯ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

‘ಬ್ಯಾಂಕ್‌ಗಳು ಮಹಿಳೆಯರ ಮೇಲಿನ ನಂಬಿಕೆಯಿಂದ ಭದ್ರತೆ ಇಲ್ಲದೆ ಸಾಲ ನೀಡುತ್ತಿವೆ. ಮಹಿಳೆಯರೂ ಅಷ್ಟೇ ವಿಶ್ವಾಸದಿಂದ ಸಾಲ ಹಿಂದಿರುಗಿಸಬೇಕು. ಸಾಲ ಪಡೆದ ಉದ್ದೇಶಕ್ಕೆ ಹಣ ಬಳಕೆ ಮಾಡಬೇಕು. ಸಕಾಲಕ್ಕೆ ಸಾಲ ಮರುಪಾವತಿಸಿದರೆ ₹ 20 ಲಕ್ಷದವರೆಗೆ ಸಾಲ ನೀಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಮಹಿಳಾ ಸ್ವಸಹಾಯ ಸಂಘಗಳು ಸಾಲದ ಪ್ರತಿ ಕಂತನ್ನು ಸಕಾಲಕ್ಕೆ ಪಾವತಿಸುವುದರಿಂದ ಮತ್ತೆ ಸಾಲ ಪಡೆಯಲು ಅರ್ಹತೆ ಪಡೆದುಕೊಳ್ಳುತ್ತವೆ. ಬ್ಯಾಂಕ್‌ಗಳ ಸೌಲಭ್ಯ, ಠೇವಣಿ ಖಾತೆ ತೆರೆಯುವುದು, ಉಳಿತಾಯ ಖಾತೆಗೆ ವಿಮೆ ಪಡೆಯುವ ವಿಧಾನವನ್ನು ತಿಳಿಯಬೇಕು’ ಎಂದು ಆರ್ಥಿಕ ಸಾಕ್ಷರತಾ ಕೇಂದ್ರದ ಪ್ರತಿನಿಧಿ ವಿಶಾಲಾಕ್ಷಿ ಸಲಹೆ ನೀಡಿದರು.

ಅರಾಭಿಕೊತ್ತನೂರು, ಚೆಲುವನಹಳ್ಳಿ, ವೆಂಕಟಾಪುರ ಗ್ರಾಮಗಳ ಸ್ವಸಹಾಯ ಮಹಿಳಾ ಸಂಘಗಳ ಸದಸ್ಯರಿಗೆ ಸಾಲ ವಿತರಿಸಲಾಯಿತು. ದಾನ್‌ ಪ್ರತಿಷ್ಠಾನದ ಸಂಯೋಜಕ ರಮೇಶ್, ಅರಾಭಿಕೊತ್ತನೂರು ಗ್ರಾ.ಪಂ ಪಿಡಿಒ ಅನುರಾಧಾ, ಪ್ರೇರಕ ರಾಮಚಂದ್ರಪ್ಪ, ಮಹಿಳಾ ಒಕ್ಕೂಟದ ಸದಸ್ಯರಾದ ಅನಿತಾ, ಅರುಣಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.