ADVERTISEMENT

12ಸಚಿವರ ಸಿ.ಡಿ; ಆರ್‌ಎಸ್‌ಎಸ್‌ಗೆ ಒಪ್ಪಿಗೆಯೋ?: ಸಿ.ಎಂ.ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 14:48 IST
Last Updated 16 ಜನವರಿ 2023, 14:48 IST
ಸಿ.ಎಂ.ಇಬ್ರಾಹಿಂ
ಸಿ.ಎಂ.ಇಬ್ರಾಹಿಂ   

ಕೋಲಾರ: ‘ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದ 12 ಸಚಿವರ ಬಾಂಬೆ ಸಿ.ಡಿಗಳು ಇವೆ. ಕಾಂಗ್ರೆಸ್‌ನವರು ಮಾತ್ರ ಬಾಯಿ ಬಿಡುತ್ತಿಲ್ಲ. ಅವರ ಸಿ.ಡಿಗಳೂ ಇರಬಹುದೇನೋ? ಚುನಾವಣೆ ಸಮಯದಲ್ಲಿ ಮತ್ತಷ್ಟು ಆಡಿಯೊ, ವಿಡಿಯೊ ಹೊರಬರಲಿವೆ’ ಎಂದು ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ತಡೆಯಾಜ್ಞೆ ತೆಗೆದುಕೊಂಡು ಬಂದು ಹಲವು ಮಂತ್ರಿಗಳು ಇದ್ದಾರೆ. ಇವರಲ್ಲದೇ, ಕೇಂದ್ರದ ಮಾಜಿ ಸಚಿವರು ಒಬ್ಬರಿದ್ದಾರೆ. ಗೋಪಾಲಯ್ಯ ಮಾತ್ರ ತಡೆಯಾಜ್ಞೆ ತರಲಿಲ್ಲ. ಅಂಥವರ ಪಕ್ಕದಲ್ಲಿ ಕುಳಿತಿರುವ ಬಸವರಾಜ ಬೊಮ್ಮಾಯಿ, ನೀನು ಎಲ್ಲಿ ಹೋಗಿ ಸಿಲುಕಿಕೊಂಡಿದ್ದಿಯಪ್ಪ? ಇವರಿಗೆ ನಾಚಿಕೆ ಇದೆಯೇ? ಆರ್‌ಎಸ್‌ಎಸ್‌ನಲ್ಲಿ ಕೆಲವರು ಪ್ರಾಮಾಣಿಕರು ಇದ್ದಾರೆ. ಅವರಿಗೆ ಇದು ಒಪ್ಪಿಗೆಯೋ’ ಎಂದು ಪ್ರಶ್ನಿಸಿದರು.

ಗುಜರಾತ್‌ನಲ್ಲಿ ಸ್ಯಾಂಟ್ರೊ ರವಿ ಬಂಧನ ಕುರಿತ ಪ್ರಶ್ನೆಗೆ, ‘ಸ್ಯಾಂಟ್ರೊ ರವಿ, ಸಿ.ಟಿ.ರವಿ ಇವೆಲ್ಲಾ ರಾಷ್ಟ್ರೀಯ ಪಕ್ಷದ ಶೇ 20, ಶೇ 40 ಗಿರಾಕಿಗಳು. ನಮಗೆ ನಟರಾಜನೇ ಗತಿ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಸ್ಯಾಂಟ್ರೊ ರವಿ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಕೋಲಾರದಲ್ಲಿ ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿಯನ್ನು ಏಕೆ ಕಣಕ್ಕಿಳಿಸಲಿಲ್ಲ ಎಂಬ ಪ್ರಶ್ನೆಗೆ, ‘ಹಲವಾರು ಕಡೆ ನಾವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದೇವೆ. ಕಾಂಗ್ರೆಸ್‌ನವರು ಎಷ್ಟು ಕಡೆ ಕಣಕ್ಕಿಳಿಸುತ್ತಿದ್ದಾರೆ? ವಿಧಾನ ಪರಿಷತ್‌ನಲ್ಲಿ ನನ್ನನ್ನೇ ನಾಯಕನನ್ನಾಗಿ ಅವರು ಮಾಡಲಿಲ್ಲ. ಹೀಗಾಗಿ, ನಾನೇ ಮುಖಕ್ಕೆ ಉಗಿದು ರಾಜೀನಾಮೆ ನೀಡಿ ಬಂದೆ. ವೋಟು ಹಾಕಿಸಿಕೊಳ್ಳಲೂ ಮಾತ್ರ ನಾವು ಬೇಕು. ಮುಸ್ಲಿಮರ ವಿಚಾರದಲ್ಲಿ ಕಾಂಗ್ರೆಸ್‌ನವರು ಬಿಜೆಪಿಗಿಂತ ಕಳಪೆ. ಮುಸ್ಲಿಂ ಸಮುದಾಯದ ಹಲವು ನಾಯಕರು ಕಾಂಗ್ರೆಸ್‌ ಬಿಟ್ಟು ಬರಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.