ಕೋಲಾರ: ‘ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಲು ಏಕಾಗ್ರತೆ ಮುಖ್ಯ. ವಿದ್ಯಾರ್ಥಿಗಳಿಗೆ ಸುದರ್ಶನ ಕ್ರಿಯೆಯು ವಿದ್ಯಾಭ್ಯಾಸದತ್ತ ಗಮನ ಹರಿಸಲು ಸಹಕಾರಿಯಾಗುತ್ತದೆ’ ಎಂದು ಆರ್ಟ್ ಆಫ್ ಲಿವಿಂಗ್ ಪ್ರತಿನಿಧಿ ಪಾಟೀಲ್ ಗುರೂಜಿ ಅಭಿಪ್ರಾಯಪಟ್ಟರು.
ಇಲ್ಲಿನ ಆರ್.ವಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ ನಡೆದ ಸುದರ್ಶನ ಕ್ರಿಯೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಪ್ರಾಣಾಯಾಮ, ಏಕಾಗ್ರತೆ ಹಾಗೂ ಧ್ಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡುತ್ತದೆ’ ಎಂದರು.
‘ಮಕ್ಕಳ ಮನಸ್ಸು ವಿದ್ಯಾಭ್ಯಾಸದತ್ತ ಕೇಂದ್ರೀಕೃತವಾಗಿರಬೇಕು. ವಿದ್ಯಾರ್ಥಿ ದಿಸೆಯಲ್ಲಿ ಬೇರೆ ಬೇರೆ ಆಕರ್ಷಣೆಗಳು ಸಹಜ. ಆದರೆ, ಈ ಆಕರ್ಷಣೆಗಳಿಗೆ ಬಲಿಯಾಗಬಾರದು. ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆ ಆರಂಭಕ್ಕೂ ಮುನ್ನ ಸುದರ್ಶನ ಕ್ರಿಯೆ ಮಾಡಬೇಕು’ ಎಂದು ಸಲಹೆ ನೀಡಿದರು.
‘ಮನುಷ್ಯ ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಆನಂದದಿಂದ ಜೀವಿಸುವುದನ್ನು ಮರೆತಿದ್ದಾನೆ. ಮಾನಸಿಕ ಒತ್ತಡ, ಅನಿಶ್ಚಿತತೆ, ನಿರುತ್ಸಾಹ, ಬದುಕು ಹಾಗೂ ಬಾಂಧವ್ಯದಲ್ಲಿ ಬಿರುಕು ಕಾಣುತ್ತಿದೆ. ಇದರ ನಿವಾರಣೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದು ಚಿನ್ಮಯ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಪ್ರಸಾದ್ ಹೇಳಿದರು.
‘ಕೋಲಾರ ಜಿಲ್ಲೆಯಲ್ಲಿ ಹಲವು ಬಾರಿ ತರಬೇತಿ ಶಿಬಿರ ನಡೆಸಲಾಗಿದೆ. ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದು ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದಾರೆ’ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸದಸ್ಯ ಎಂ.ಆರ್.ಕೃಷ್ಣಮೂರ್ತಿ ವಿವರಿಸಿದರು.
ಶಾಲೆಯ ಕಾರ್ಯದರ್ಶಿ ಸೋಮಶೇಖರ್, ಪ್ರಾಂಶುಪಾಲೆ ವೇದಾವತಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ವಿ.ಕೆ.ರಾಜೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.