ಕೋಲಾರ: ಬೆಂಗಳೂರಿನಿಂದ ತಿರುಪತಿಗೆ ಪಾದಯಾತ್ರೆ ಕೈಗೊಂಡಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಮತ್ತು ಕುಟುಂಬ ಸದಸ್ಯರು ಸೋಮವಾರ ಜಿಲ್ಲೆಯನ್ನು ಪ್ರವೇಶಿಸಿದರು.
ಐಪಿಎಸ್ ಅಧಿಕಾರಿಯಾಗಿರುವ ಪತಿ ಹೇಮಂತ್ ನಿಂಬಾಳ್ಕರ್, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರೊಂದಿಗೆ ಬೆಂಗಳೂರಿನಿಂದ ಶನಿವಾರ (ಜ.11) ಪಾದಯಾತ್ರೆ ಆರಂಭಿಸಿದ್ದ ಅಂಜಲಿ ನಿಂಬಾಳ್ಕರ್ ಅವರು ಸೋಮವಾರ ಬೆಳಿಗ್ಗೆ ಗಡಿ ಭಾಗ ರಾಮಸಂದ್ರ ಗೇಟ್ ಮೂಲಕ ಜಿಲ್ಲೆಗೆ ಆಗಮಿಸಿದರು. ಅವರು ಮಾರ್ಗ ಮಧ್ಯೆ ಹಲವೆಡೆ ಪತಿ ಹಾಗೂ ಕುಟುಂಬ ಸದಸ್ಯರೊಂದಿಗೆ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಂಡರು.
‘ಖಾನಾಪುರ ಕ್ಷೇತ್ರಕ್ಕೆ ಹಾಗೂ ಕ್ಷೇತ್ರದ ಜನರಿಗೆ ಒಳ್ಳೆಯದಾಗಲಿ ಎಂಬ ಸಂಕಲ್ಪದೊಂದಿಗೆ ತಿರುಪತಿಗೆ ಪಾದಯಾತ್ರೆ ಕೈಗೊಂಡಿದ್ದೇವೆ. ಇದೇ ಮೊದಲ ಬಾರಿಗೆ ಕಾಲ್ನಡಿಗೆಯಲ್ಲಿ ತಿರುಪತಿಗೆ ಹೋಗುತ್ತಿದ್ದೇವೆ’ ಎಂದು ಅಂಜಲಿ ನಿಂಬಾಳ್ಕರ್ ಸುದ್ದಿಗಾರರಿಗೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದು ಸಾಗಿರುವ ಅಂಜಲಿ ನಿಂಬಾಳ್ಕರ್ ಮತ್ತು ಕುಟುಂಬ ಸದಸ್ಯರು ರಾಜ್ಯದ ಗಡಿ ಭಾಗವಾದ ಮುಳಬಾಗಿಲು ತಾಲ್ಲೂಕಿನ ನಂಗಲಿ ಮೂಲಕ ಸಂಜೆ ಆಂಧ್ರಪ್ರದೇಶ ಪ್ರವೇಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.