ಬೇತಮಂಗಲ: ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿ ಮಾರಕಾಸ್ತ್ರಗಳೊಂದಿಗೆ ಆಟೊದಲ್ಲಿ ಕಾಯುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಬೇತಮಂಗಲ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರಾಜು (23) ಮತ್ತು ಸಲ್ಮಾನ್(22) ಬಂಧಿತರು. ಬೆಂಗಳೂರಿನ ಕಲ್ಕೆರೆ ವಾಸಿ ಕಾರ್ತಿಕ್, ಶಿವಾಜಿನಗರ ಚೌಕ ನಿವಾಸಿ ಯತೀಶ್, ಕಲ್ಕೆರೆ ನಿವಾಸಿ ಹೇಮಂತ್ ತಪ್ಪಿಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬೆಂಗಳೂರಿನ ಗಾರ್ಡನ್ಸಿಟಿ ಕಾಲೇಜು ಬಳಿ ಕದ್ದಿದ್ದ ಆಟೊದಲ್ಲಿಯೇ ಕೃತ್ಯ ಎಸಗಲು ಆರೋಪಿಗಳು ಬಂದಿದ್ದರು.
ಬಂಧಿತರಿಂದ 3 ಚಾಕುಗಳು, 1 ಹಗ್ಗ ಮತ್ತು 1 ಕೆ.ಜಿ ಮೆಣಸಿನ ಪುಡಿ ವಶಪಡಿಸಿಕೊಳ್ಳಲಾಗಿದೆ. ಪರಾರಿಯಾದವರ ಪತ್ತೆಗಾಗಿ ವೃತ್ತ ನಿರೀಕ್ಷಕ ಆರ್. ವೆಂಕಟೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.
ಕೆಜಿಎಫ್ ತಾಲ್ಲೂಕಿನ ಬಂಗಾರು ತಿರುಪತಿ ದೇವಾಲಯದಲ್ಲಿ ಗುರುವಾರ ವೈಕುಂಠ ಏಕಾದಶಿ ಇತ್ತು. ಇದರ ಅಂಗವಾಗಿ ಬಂದೋಬಸ್ತ್ ಕಾರ್ಯ ಮುಗಿಸಿಕೊಂಡು ಪೊಲೀಸರು ಠಾಣೆಗೆ ಬರುವಾಗ ಮುಳಬಾಗಿಲು- ಗುಟ್ಟಹಳ್ಳಿ ರಸ್ತೆ ಬಳಿಯ ನೀಲಗಿರಿ ತೋಪಿನಲ್ಲಿ 5 ಮಂದಿಯ ತಂಡ ಆಟೊ ನಿಲ್ಲಿಸಿಕೊಂಡಿತ್ತು. ಇದನ್ನು ಗಮನಿಸಿದ ಪಿಎಸ್ಐ ಅವರನ್ನು ವಿಚಾರಿಸಿದ್ದಾರೆ. ಆಗತಪ್ಪು ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪಿಎಸ್ಐ ಜಗದೀಶ್ ರೆಡ್ಡಿ, ಸಿಬ್ಬಂದಿಯಾದ ಸತೀಶ್, ಮಣಿಕಂಠ, ಸತೀಶ್ ಕುಮಾರ್, ಮುರುಳಿ, ಶಿವಪ್ರಸಾದ್, ರಾಜ್ಕುಮಾರ್, ಆಲಗೌಡ ಕುಂಬಾರ ಅವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜು ಮತ್ತು ಉಪಾಧೀಕ್ಷಕ ಮುರಳೀಧರ್ ಶ್ಲಾಘಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.