ನಂಗಲಿ: ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಸೃಷ್ಟಿಸಿರುವ ಭೀತಿಯಿಂದ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ವಾಹನ ಸಂಚಾರ ವಿರಳವಾಗಿದೆ.
ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ, ನಂಗಲಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೆರೆಯ ಆಂದ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು.ಆದರೆ ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನಗಳು ಕಡಿಮೆ ಆಗಿದ್ದು, ರಸ್ತೆ ಖಾಲಿ ಖಾಲಿಯಾಗಿದೆ. ಜೆಎಸ್ಆರ್ ಟೋಲ್ ಸಂಗ್ರಹ ಕೇಂದ್ರಗಳಲ್ಲಿಯೂ ವಾಹನಗಳಿಲ್ಲದೆ ಬಿಕೊ ಎನ್ನುತ್ತಿವೆ.
ಬೆಂಗಳೂರು, ಮಂಗಳೂರಿನಿಂದ ನಿತ್ಯ ಇದೇ ಹೆದ್ದಾರಿಯಲ್ಲಿ ವ್ಯಾಪಾರ, ವಹಿವಾಟಿಗಾಗಿ ಸಾವಿರಾರು ಟ್ರಕ್, ಲಾರಿಗಳು ಹೊರರಾಜ್ಯಗಳಿಗೆ ಸಂಚರಿಸುತ್ತಿದ್ದವು. ಆದರೀಗ ಯಾವುದೇ ವಾಹನಗಳಿಲ್ಲದೆ, ಗಿಜಿಗುಡುತ್ತಿದ್ದ ಹೆದ್ದಾರಿ ಸ್ತಬ್ಧವಾಗಿದೆ.
ತಮಿಳುನಾಡಿನ ಚೆನ್ನೈಗೆ ನೂರಾರು ಸಂಖ್ಯೆಯಲ್ಲಿ ತರಕಾರಿಗಳನ್ನು ಹೊತ್ತ ಲಾರಿಗಳು, ಟೆಂಪೊಗಳು ಸಂಚರಿಸುತ್ತಿದ್ದವು. ಆದರೆ ಕೊರೊನಾ ಭಯದಿಂದ ಚೆನ್ನೈಗೆ ರವಾನೆಯಾಗುವ ತರಕಾರಿ ಪ್ರಮಾಣ ಕಡಿಮೆ ಆಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ತೀರಾ ಕಡಿಮೆಯಾಗಿದೆ.
ಚೆನ್ನೈಯಲ್ಲಿನ ಹೋಂಡಾ ದ್ವಿಚಕ್ರ ಮತ್ತು ಕಾರುಗಳ ಕಾರ್ಖಾನೆಗೆ ರಾಜ್ಯದಿಂದ ರಫ್ತಾಗುತ್ತಿದ್ದ ಸಲಕರಣೆಗಳನ್ನು ಹೊತ್ತ ಲೆಕ್ಕವಿಲ್ಲದಷ್ಟು ಟ್ರಕ್ ಹಾಗೂ ರೈಲು ಮತ್ತು ಗಾಲಿ ಕಾರ್ಖಾನೆಗೆ ಸಲಕರಣೆಗಳನ್ನು ಸರಬರಾಜು ಮಾಡುತ್ತಿದ್ದ ಯಾವ ವಾಹನವೂ ಕಾಣಸಿಗುತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.