ADVERTISEMENT

ಕೊಲೆ ಬೆದರಿಕೆ; ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿಗೆ ದೂರು ನೀಡಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:54 IST
Last Updated 23 ಸೆಪ್ಟೆಂಬರ್ 2022, 13:54 IST

ಮಾಲೂರು (ಕೋಲಾರ): ‘ಪ್ರಕರಣ ಬಗೆಹರಿದ ನಂತರ ವಾಹನ ಗುದ್ದಿಸಿ ಸಾಯಿಸುವುದಾಗಿ ಊರಿನ ಕೆಲವರು ಬೆದರಿಕೆ ಹಾಕಿದ್ದಾರೆ’ ಎಂದು ಉಳ್ಳೇರಹಳ್ಳಿ ಗ್ರಾಮದ ಸಂತ್ರಸ್ತ ಮಹಿಳೆ ಶೋಭಾ, ಶುಕ್ರವಾರ ಇಲ್ಲಿಗೆ ಭೇಟಿ ನೀಡಿದ್ದ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ದೂರು ನೀಡಿದರು.

‘ಕೆಲಸಕ್ಕೆ ತೆರಳಲು ಗ್ರಾಮದಿಂದ ಟೇಕಲ್‌ ರೈಲು ನಿಲ್ದಾಣಕ್ಕೆ ನಡೆದು ಹೋಗುವಾಗ ವಾಹನದಲ್ಲಿ ಡಿಕ್ಕಿ ಹೊಡೆಸಿ ಸಾಯಿಸುವುದಾಗಿ ಕೆಲ ವ್ಯಕ್ತಿಗಳು ಮಾತನಾಡಿರುವುದನ್ನು ನನ್ನ ತಂಗಿ ‌ಹೇಳಿದಳು. ನನಗೆ ರಕ್ಷಣೆ ಕೊಡಿ’ ಎಂದು ಮನವಿ ಮಾಡಿದರು.

‘ಊರು ಖಾಲಿ ಮಾಡುವಂತೆ ಒತ್ತಡ ಹೇರಿದ್ದರು. ಅಂಬೇಡ್ಕರ್‌ ಸಂಘದವರು ರಾತ್ರಿ ಮನೆಗೆ ಬಂದು ಸಹಾಯ ಮಾಡದಿದ್ದರೆ ನಾವು ಸತ್ತೇ ಹೋಗುತ್ತಿದ್ದೆವು’ ಎಂದರು.

ADVERTISEMENT

ರಕ್ಷಣೆ ಭರವಸೆ: ‘ಈ ಬಗ್ಗೆ ತನಿಖೆ ನಡೆಸಲಾಗುವುದು. ಸರ್ಕಾರದಿಂದ ಎಲ್ಲಾ ರೀತಿಯಲ್ಲಿ ರಕ್ಷಣೆ ಕೊಡಿಸುತ್ತೇವೆ’ ಎಂದು ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಂ.ಪಿ.ಕುಮಾರಸ್ವಾಮಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.