ಕೋಲಾರ: ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎತ್ತಿನಹೊಳೆ ಯೋಜನೆ ಕಾಮಗಾರಿ ವಿಳಂಬವಾಗಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಮುಖ್ಯಮಂತ್ರಿಗಳ ಬಳಿ ಜಿಲ್ಲೆಯ ಶಾಸಕರ ನಿಯೋಗ ಹೋಗುತ್ತೇವೆ’ ಎಂದು ಶಾಸಕ ಕೃಷ್ಣಬೈರೇಗೌಡ ಹೇಳಿದರು.
ಎತ್ತಿನಹೊಳೆ ಹಾಗೂ ಕೆ.ಸಿ ವ್ಯಾಲಿ ಯೋಜನೆ ಸಂಬಂಧ ಇಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗುವ ನಿರ್ಣಯ ಕೈಗೊಳ್ಳಲಾಯಿತು.
‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಕುಂಠಿತಗೊಂಡಿದೆ. ಬಯಲು ಸೀಮೆಯ ನೀರಾವರಿ ಯೋಜನೆಗಳ ಕಾಮಗಾರಿ ಸ್ಥಗಿತಗೊಂಡಿದೆ. ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ. ಯೋಜನೆ ಬಗ್ಗೆ ಬಿಜೆಪಿ ಸರ್ಕಾರ ಆಸಕ್ತಿ ತೋರುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬೈರಗೊಂಡ್ಲು ಜಲಾಶಯದಿಂದ ಕೋಲಾರ ಜಿಲ್ಲೆಗೆ ಪೈಪ್ಲೈನ್ ಮೂಲಕ ನೀರು ತರುವುದಕ್ಕೆ ಸಂಬಂಧಪಟ್ಟ ಕೊಳವೆ ಮಾರ್ಗದ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿಲ್ಲ ಮತ್ತು ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಬೈರಗೊಂಡ್ಲು ಜಲಾಶಯಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕಿರುವ ಜಮೀನಿಗೆ ಸರ್ಕಾರ ಇನ್ನೂ ಪರಿಹಾರಧನ ನಿಗದಿಪಡಿಸಿಲ್ಲ’ ಎಂದರು.
ಪರ್ಯಾಯ ಕೆರೆಗಳು: ‘ಎತ್ತಿನಹೊಳೆ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ತುಂಬಿಸಲು ಅಥವಾ ಮುಂದೆ ಈ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಈ ಕೆರೆಗಳ ಬದಲಿಗೆ ಎತ್ತಿನಹೊಳೆ ಯೋಜನೆ ನೀರನ್ನು ಬೇರೆ ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಎತ್ತಿನಹೊಳೆ ಯೋಜನೆ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಹರಿಸಲು, ಅಂತಹ ತಾಲ್ಲೂಕುಗಳಲ್ಲಿ ಎತ್ತಿನಹೊಳೆ ನೀರು ಶೇಖರಣೆಗೆ ಪರ್ಯಾಯ ಕೆರೆಗಳನ್ನು ಪಟ್ಟಿ ಮಾಡಿ ಸರ್ಕಾರದ ಅನುಮೋದನೆ ಪಡೆಯಬೇಕು’ ಎಂದು ಹೇಳಿದರು.
450 ಎಂಎಲ್ಡಿ ನೀರು: ‘ಕೆ.ಸಿ ವ್ಯಾಲಿ ಯೋಜನೆಯಲ್ಲಿ ಜಿಲ್ಲೆಗೆ ಸದ್ಯ 260 ಎಂಎಲ್ಡಿ ನೀರು ಬರುತ್ತಿದೆ. ಬಂಗಾರಪೇಟೆ, ಮಾಲೂರು ಹಾಗೂ ಮುಳಬಾಗಿಲು ಭಾಗಕ್ಕೆ ಇನ್ನೂ ನೀರು ಹೋಗಿಲ್ಲ. ಈ ಬಗ್ಗೆ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳ ಜತೆ ಚರ್ಚಿಸಿದ್ದು, ಡಿಸೆಂಬರ್ ವೇಳೆಗೆ 450 ಎಂಎಲ್ಡಿ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ವಿವರಿಸಿದರು.
‘ಕೆ.ಸಿ ವ್ಯಾಲಿ ಯೋಜನೆಯಲ್ಲಿ ಜಿಲ್ಲೆಯ ಪಾಲಿನ ನೀರನ್ನು ತ್ವರಿತವಾಗಿ ಪಡೆದುಕೊಳ್ಳಲು ಮಾತುಕತೆ ನಡೆಯುತ್ತಿದೆ. ಸೆಪ್ಟಂಬರ್ ವೇಳೆಗೆ ಹೆಚ್ಚುವರಿಯಾಗಿ 100 ಎಂಎಲ್ಡಿ ನೀರು ಹರಿಯಲಿದೆ. ಜಿಲ್ಲೆಯ ಯಾವುದೇ ತಾಲ್ಲೂಕಿಗೆ ಅನ್ಯಾಯವಾಗದಂತೆ ನೀರು ಹರಿಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದರು.
‘ಯರಗೋಳ್ ಯೋಜನೆಯ ಡ್ಯಾಂ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸ ಬಾಕಿಯಿವೆ. ಶೀಘ್ರವೇ ಆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ. ಬಾಕಿ ಕಾಮಗಾರಿಗಳು ಹಾಗೂ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸರ್ಕಾರದ ಅನುಮೋದನೆ ಪಡೆಯಬೇಕು’ ಎಂದು ಮಾಹಿತಿ ನೀಡಿದರು.
ನೀರಿನ ಸದ್ಬಳಕೆ: ‘ಎತ್ತಿನಹೊಳೆ ಯೋಜನೆ ನೀರು ನಷ್ಟವಾಗದಂತೆ ಪರ್ಯಾಯ ಕೆರೆಗಳಿಗೆ ಹರಿಸಬೇಕು. ಅದೇ ರೀತಿ ಕೆ.ಸಿ ವ್ಯಾಲಿ ಯೋಜನೆ ನೀರನ್ನು ಸದ್ಬಳಕೆ ಮಾಡಬೇಕು. ಎತ್ತಿನಹೊಳೆ ನೀರು ಬಂದರೆ ಹೆಚ್ಚಿನ ಕೆರೆಗಳನ್ನು ತುಂಬಿಸಬಹುದು’ ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ಅಭಿಪ್ರಾಯಪಟ್ಟರು.
ಶಾಸಕರಾದ ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಸಣ್ಣ ನೀರಾವರಿ ಇಲಾಖೆ ಹಾಗೂ ಕೆ.ಸಿ ವ್ಯಾಲಿ ಯೋಜನೆ ಅಧಿಕಾರಿಗಳ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.