ADVERTISEMENT

ಮಾಲೂರು: ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:04 IST
Last Updated 25 ಫೆಬ್ರುವರಿ 2026, 7:04 IST
ಮಾಲೂರಿನ ನಗರಸಭಾ ಕಚೇರಿ ಸಭಾಂಗಣದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಹಲವು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಮಾಲೂರಿನ ನಗರಸಭಾ ಕಚೇರಿ ಸಭಾಂಗಣದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಹಲವು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಮಾಲೂರು: ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಹಲವು ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ನಗರದಲ್ಲಿ ನಡೆಯುತ್ತಿರುವ ಜಲ ಜೀವನ್ ಮಿಷನ್ ಕಾರ್ಯಕ್ರಮ ಸುಮಾರು ₹46 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಶೇ 90ರಟ್ಟಿದ್ದು, ಶೇ 10ರಷ್ಟು ಹಣ ನಗರಸಭೆಯಿಂದ ನೀಡಬೇಕಾಗಿದೆ. ಇದನ್ನು ನಗರಸಭೆ ಪಾವತಿ ಮಾಡದಿದ್ದಲ್ಲಿ ಕಾರ್ಯಕ್ರಮ ಸ್ಥಗಿತವಾಗಲಿದೆ ಎಂದು ಜಲ ಜೀವನ್ ಅಧಿಕಾರಿ ಸುಬ್ರಮಣಿ ತಿಳಿಸಿದರು. ಹಾಗಾಗಿ ಶೇ 10ರಷ್ಟು ಹಣವನ್ನು ಪಾವತಿಸುವಂತೆ ನಗರಸಭೆ ಆಯುಕ್ತರಿಗೆ ಶಾಸಕರು ಸೂಚಿಸಿದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ನಗರದಲ್ಲಿ ಸುಮಾರು 24 ಕಿಮೀ ರಸ್ತೆ ಡಾಂಬರೀಕರಣ ಮಾಡಲು ಸರ್ಕಾರದಿಂದ ₹25 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಜಲ ಜೀವನ್ ಮಿಷನ್ ಯೋಜನೆ ಅಡಿ ಕುಡಿವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗುವುದು. ಹಾಗಾಗಿ ಕೂಡಲೇ ಪೈಪ್‌ಲೈನ್ ಅಳವಡಿಸುವ ಕಾರ್ಯ ಶೀಘ್ರವಾಗಿ ಮುಗಿಸಬೇಕು ಎಂದರು.

ADVERTISEMENT

ನಗರದ ಮಾಲೂರು -ಹೊಸೂರು ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತದೆ. ಜೊತೆಗೆ ಡಾಂಬರು ಕಾಣದೆ ಹಳ್ಳ, ಗುಂಡಿಗಳಿಂದ ಕೂಡಿದೆ. ಹಾಗಾಗಿ ರಸ್ತೆಗೆ ಡಾಂಬರೀಕರಣ ಮಾಡಬೇಕು. ಜೊತೆಗೆ ನಗರದಿಂದ ಸೀತನಾಯಕನಹಳ್ಳಿ ಗ್ರಾಮದಿಂದ ಲೆಡ್ಡೆಜ್ ಕಾರ್ಖಾನೆವರೆಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಶಿಥಿಲಾವಸ್ಥೆಯ ಅಂಗಡಿ ಮಳಿಗೆ ತೆರವು: ನಗರದ ಬಸ್ ನಿಲ್ದಾಣದ ಬಳಿ ನಗರಸಭೆಗೆ ಸೇರಿದ್ದ ಶಿಥಿಲಾವಸ್ಥೆಯಲ್ಲಿರುವ ಸುಮಾರು 12 ಅಂಗಡಿ ಮಳೆಗೆಗಳನ್ನು ತೆರವುಗೊಳಿಸಬೇಕೆಂದು ನಗರಸಭಾ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ನರಸಿಂಹ, ಸಣ್ಣ ನೀರಾವರಿ ಇಲಾಖೆ ಇಇ ಹರಿಕೃಷ್ಣ, ನಗರಸಭೆ ಪೌರಾಯುಕ್ತ ಮಹದೇವ, ಸಿಪಿಐ ರಾಮಪ್ಪ ಗುತ್ತೇರ, ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೃಷ್ಣಪ್ಪ, ಲೋಕೋಪಯೋಗಿ ಸಹಾಯಕ ನಿರ್ದೇಶಕ ರಾಜು, ಎಡಿಎಲ್‌ಆರ್ ಕೃಷ್ಣ ಸಿಂಗ್ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.

ಅಕ್ರಮ ನಿವೇಶನ ಖಾತೆ ರದ್ದತಿಗೆ ಕ್ರಮ

ನಗರಸಭೆಗೆ ಸೇರಿದ ಸುಮಾರು 326 ನಿವೇಶನ ಅಕ್ರಮ ಖಾತೆ ಮಾಡಿಸಿಕೊಂಡಿರುವವರನ್ನು ಪತ್ತೆ ಹಚ್ಚಲು ನಗರಸಭೆ ಅಧಿಕಾರಿಗಳಿಗೆ  ಸೂಚಿಸಲಾಗಿತ್ತು. 326 ಅಕ್ರಮ ಖಾತೆಗಳ ಪೈಕಿ 192 ನಿವೇಶನ ಖಾಲಿಯಾಗಿದ್ದು ನಗರಸಭೆ ವಶಪಡಿಸಿಕೊಳ್ಳಲಿದೆ. ಉಳಿದ 134 ನಿವೇಶನಗಳಲ್ಲಿ ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇವರ ಖಾತೆ ರದ್ದು ಮಾಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಬೋಗಸ್ ದಾಖಲೆ ಸೃಷ್ಟಿಸಿ ಅಕ್ರಮವಾಗಿ ನಗರಸಭೆಗೆ ಸೇರಿದ ಆಸ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರೆ ಮುಲಾಜಿಲ್ಲದೆ  ವಶಪಡಿಸಿಕೊಳ್ಳಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.