ADVERTISEMENT

ಚಾಮರಾಜನಗರ ದುರಂತ: ಶಾಸಕ ಕೆ.ಆರ್.ರಮೇಶ್‌ಕುಮಾರ್ ಕಳವಳ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 14:04 IST
Last Updated 8 ಜುಲೈ 2021, 14:04 IST

ಕೋಲಾರ: ‘ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 23 ಮಂದಿ ಕೊರೊನಾ ಸೋಂಕಿತರು ಮೃತಪಟ್ಟರೂ ಸರ್ಕಾರ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ. ಈ ವ್ಯವಸ್ಥೆ ಯಾವ ಕಡೆ ಸಾಗುತ್ತಿದೆ?’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಮಾರ್ಮಿಕವಾಗಿ ಪ್ರಶ್ನಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್‌ನಿಂದ ರಾಜ್ಯದಲ್ಲಿ ಸಾಕಷ್ಟು ಮಂದಿ ಮೃತಪಟ್ಟರು. ಸರ್ಕಾರಕ್ಕೆ ಇದರ ಗಂಭೀರತೆ ಅರ್ಥವಾಗದೆ ಹೋಯಿತು. ವಿಪಕ್ಷದವರು ಸರ್ಕಾರವನ್ನು ಖಂಡಿಸಿದರೆ ಮಾಧ್ಯಮಗಳು ವಾಸ್ತವ ಬಿಟ್ಟು, ಮೊದಲ ಮತ್ತು ಕೊನೆಯ ಮಾತು ಬಿತ್ತರಿಸುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ವ್ಯವಸ್ಥೆ ಯಾವು ದಿಕ್ಕಿನಲ್ಲಿ ಸಾಗುತ್ತಿದೆ. ವಿಪಕ್ಷಗಳು ತಪ್ಪು ಖಂಡಿಸುತ್ತಿದ್ದರೂ ಬೆಂಬಲ ನೀಡಬೇಕಾದ ಮಾಧ್ಯಮಗಳು ಬೇರೆ ವಿಚಾರ ಪ್ರಕಟಿಸುತ್ತಿವೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿರುವ ಜನರೇ ಮುಂದೆ ಸರ್ಕಾರಕ್ಕೆ ತಕ್ಕ ಉತ್ತರ ಕೊಡುತ್ತಾರೆ’ ಎಂದು ಹೇಳಿದರು.

ADVERTISEMENT

‘ರಫೆಲ್ ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆ ತನಿಖೆ ನಡೆಸಲು ಫ್ರಾನ್ಸ್‌ ಸಿದ್ಧವಿದೆ. ಆದರೆ, ನಮ್ಮ ದೆಶದವರು ಅವಕಾಶ ನೀಡುತ್ತಿಲ್ಲ. ಈ ಹಗರಣದಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿಯೇ ತನಿಖೆ ಬೇಡ ಎನ್ನುತ್ತಿದ್ದಾರೆ. ಆಳುವವರಿಗೆ ಹಗರಣ ಬಯಲಿಗೆ ಬರುತ್ತದೆ ಎಂಬ ಭಯವಿದೆ’ ಎಂದು ಕುಟುಕಿದರು.

‘ರಾಜ್ಯದಲ್ಲಿ ರಾಜಕೀಯದ ದಿಕ್ಕು ಬದಲಾಗುತ್ತಿದೆ. ಬಡ ಜನರ, ರೈತರ ಸಮಸ್ಯೆ ಪರಿಹರಿಸುವ ಕಡೆ ಹೆಚ್ಚು ಗಮನ ಹರಿಸಿದ್ದೇವೆ. ಮತ ನೀಡಿದವರ ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜನರ ಹಿತ ಕಾಯುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.