ADVERTISEMENT

ನೆರೆ ಪರಿಹಾರ: ತಾರತಮ್ಯ ಮಾಡಲ್ಲ –ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 13:12 IST
Last Updated 4 ಅಕ್ಟೋಬರ್ 2019, 13:12 IST
ಸಿ.ಟಿ.ರವಿ
ಸಿ.ಟಿ.ರವಿ   

ಕೋಲಾರ: ‘ಕೇಂದ್ರ ಸರ್ಕಾರವು ರಾಜ್ಯಕ್ಕೆ ನೆರೆ ಪರಿಹಾರ ಕೊಡುತ್ತಿಲ್ಲ ಎಂಬ ಭಾವನೆ ವ್ಯಕ್ತವಾಗಿರುವುದು ನಿಜ. ಆದರೆ, ಪರಿಹಾರ ನೀಡಿಕೆಯಲ್ಲಿ ಕೇಂದ್ರ ತಾರತಮ್ಯ ಮಾಡಲ್ಲ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೇಂದ್ರವು ರಾಜ್ಯದ ನೆರೆ ಪರಿಹಾರದ ಪ್ರಸ್ತಾವ ತಿರಸ್ಕರಿಸಿಲ್ಲ. ಪ್ರವಾಹ ನಷ್ಟದ ನಿಖರ ಅಂಕಿ ಅಂಶ ಆಧರಿಸಿ ಸದ್ಯದಲ್ಲೇ ಪರಿಹಾರ ಬಿಡುಗಡೆ ಮಾಡುತ್ತದೆ’ ಎಂದು ತಿಳಿಸಿದರು.

‘ಈ ಹಿಂದೆ ಅತಿವೃಷ್ಟಿ ಸಂಭವಿಸಿದಾಗ 3 ತಿಂಗಳ ನಂತರ ಪರಿಹಾರ ಬಿಡುಗಡೆ ಮಾಡಿದ ಉದಾಹರಣೆಗಳಿವೆ. ಈಗ ರಾಜ್ಯದಲ್ಲಿ ಅತಿವೃಷ್ಟಿಯಾಗಿ 2 ತಿಂಗಳಾಗಿದ್ದು, ಕೇಂದ್ರವು ಎಲ್ಲವನ್ನೂ ತಾಳೆ ಹಾಕಿ ಪರಿಹಾರ ನೀಡಲಿದೆ. ಪಕ್ಷವು ಪ್ರೊಡಕ್ಷನ್‌ ಯೂನಿಟ್‌ ಇದ್ದಂತೆ. ಜನರ ವಿಷಯದಲ್ಲಿ ನಾವು ಮುಂಚೂಣಿಯ ನೇತೃತ್ವ ವಹಿಸುತ್ತೇವೆ’ ಎಂದರು.

ADVERTISEMENT

‘ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಸಂಸದರು ಇಲ್ಲದಿದ್ದರೂ ಕೇಂದ್ರ ಪರಿಹಾರ ನೀಡಿದೆ. ನಮ್ಮಲ್ಲಿ ಯಾವುದೇ ತಾರತಮ್ಯವಿಲ್ಲ. ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ತಕ್ಷಣದ ಪರಿಹಾರವಾಗಿ ₹ 3 ಸಾವಿರ ಕೊಟ್ಟಿದ್ದರು. ನಮ್ಮ ಸರ್ಕಾರ ₹ 10 ಸಾವಿರ ಕೊಟ್ಟಿದೆ’ ಎಂದು ವಿವರಿಸಿದರು.

‘ಬಿಜೆಪಿಯಲ್ಲಿ ಸಾಮಾನ್ಯರು ಅಪಾಯಿಂಟ್‌ಮೆಂಟ್‌ ತೆಗೆದುಕೊಂಡು ಹೋದರೂ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶವಿದೆ. ಆದರೆ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗುವ ಅವಕಾಶ ಸಿಕ್ಕಿಲ್ಲ’ ಎಂದು ಲೇವಡಿ ಮಾಡಿದರು.

ತಪ್ಪಾಗುತ್ತದೆ: ಮುಖ್ಯಮಂತ್ರಿ ಯಡಿಯೂರಪ್ಪರ ತಂತಿಯ ಮೇಲಿನ ನಡಿಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಾರ್ವಜನಿಕ ಬದುಕಿನಲ್ಲಿರುವ ಪ್ರತಿಯೊಬ್ಬರದ್ದು ತಂತಿ ಮೇಲಿನ ನಡಿಗೆಯೇ ಆಗಿದೆ. ಸುದ್ದಿ ವಾಹಿನಿಯವರು ಕಟ್ ಅಂಡ್ ಪೇಸ್ಟ್‌ನಂತೆ ಅರ್ಧ ತೋರಿಸಿದ್ರೆ ತಪ್ಪಾಗುತ್ತದೆ. ಸದಾ ಎಚ್ಚರದಲ್ಲಿದ್ದರೆ ಗುರಿಮುಟ್ಟಲು ಸಾಧ್ಯ. ಅಧಿಕಾರ ದುರ್ಬಳಕೆ ಮಾಡಿಕೊಂಡವರು ಎಚ್ಚರಿಕೆಯಿಂದ ಇರುವುದಿಲ್ಲ’ ಎಂದರು.

‘ಅನರ್ಹ ಶಾಸಕರ ರಾಜೀನಾಮೆಯಿಂದ ಸರ್ಕಾರ ಬಂದಿದೆ ಎಂಬುದು ಗೊತ್ತಿದೆ. ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಉಪ ಚುನಾವಣೆ ಎದುರಿಸಲು ಪಕ್ಷ ಸಿದ್ಧವಿದೆ. ವರಿಷ್ಠರು ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.