ADVERTISEMENT

ಕೋಲಾರ: ಜೂಜು ಮುಕ್ತ ಕರ್ನಾಟಕ ಅಭಿಯಾನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 16:36 IST
Last Updated 1 ಅಕ್ಟೋಬರ್ 2020, 16:36 IST

ಕೋಲಾರ: ‘ದೇಶ ಹಾಗೂ ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಈ ಬಗ್ಗೆ ಯುವಕ ಯುವತಿಯರಿಗೆ ಜಾಗೃತಿ ಮೂಡಿಸುವ ಉದ್ದೇಶಕ್ಕೆ ಜೂಜು ಮುಕ್ತ ಕರ್ನಾಟಕ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಮರ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎನ್.ಪ್ರದೀಪ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜೂಜಾಟಕ್ಕೆ ಕಡಿವಾಣ ಹಾಕಬೇಕಾದ ಸರ್ಕಾರಗಳೇ ಜೂಜಾಟಕ್ಕೆ ಅನುಮತಿ ನೀಡಿ ಯುವಕ ಯುವತಿಯರನ್ನು ತಪ್ಪು ದಾರಿಗೆ ಎಳೆಯುತ್ತಿವೆ’ ಎಂದು ದೂರಿದರು.

‘ಆಕರ್ಷಕ ಜಾಹೀರಾತು ನೀಡಿ ಆಟ ಆಡಿ ಹಣ ಗೆಲ್ಲಿ ಎಂದು ಖ್ಯಾತನಾಮರ ಮೂಲಕ ಹೇಳಿಸುವ ಐಪಿಎಲ್‌ ಆಯೋಜಕರು ಪರೋಕ್ಷವಾಗಿ ಜೂಜಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಯುವಕ ಯುವತಿಯರು ಈ ಜಾಹೀರಾತುಗಳಿಂದ ಪ್ರೇರಿತರಾಗಿ ಅಡ್ಡ ದಾರಿ ಹಿಡಿದು ಜೂಜಿನಲ್ಲಿ ಹಣ ಕಳೆದುಕೊಂಡು ಹತಾಶೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಜೂಜಾಟದ ಅಪಾಯದ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ಸಾಮಾಜಿಕ ಜವಾಬ್ದಾರಿ ಹೊಂದಿರುವ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ವಿಚಾರವಂತರು ಈ ಬಗ್ಗೆ ಧ್ವನಿ ಎತ್ತಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ತಾಲ್ಲೂಕು ಘಟಕದ ಉಪಾಧ್ಯಕ್ಷ ಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.