ADVERTISEMENT

ಗಣೇಶೋತ್ಸವ: ಸೆ.5ಕ್ಕೆ ಅಂತಿಮ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 14:27 IST
Last Updated 1 ಸೆಪ್ಟೆಂಬರ್ 2021, 14:27 IST

ಕೋಲಾರ: ‘ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಭೀತಿ ಕಾರಣಕ್ಕೆ ಗಣೇಶೋತ್ಸವ ಆಚರಣೆ ಸಂಬಂಧ ಮುಖ್ಯಮಂತ್ರಿಗಳು ಈಗಾಗಲೇ ಸಭೆ ನಡೆಸಿದ್ದು, ಸೆ.5ರಂದು ಅಂತಿಮ ನಿರ್ಧಾರ ಘೋಷಿಸುತ್ತಾರೆ. ಆರೋಗ್ಯ ಇಲಾಖೆಯಿಂದಲೂ ಅಗತ್ಯ ಸಲಹೆ ನೀಡಲಾಗಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಮುದುವಾಡಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೊರೊನಾ ಸೋಂಕು ಹೆಚ್ಚಳದ ಅಪಾಯ ಇರುವುದರಿಂದ ಗಣೇಶೋತ್ಸವ ಆಚರಣೆ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು. ಅವರು ಹಿರಿಯ ಸಂಸದರ ಬಗ್ಗೆ ಹಗುರವಾಗಿ ಮಾತನಾಡಿರುವುದು ಶೋಭೆಯಲ್ಲ’ ಎಂದು ಟೀಕಿಸಿದರು.

ADVERTISEMENT

‘ಚಿಕ್ಕಬಳ್ಳಾಪುರ ಜಿಲ್ಲೆ ಜನರು ಕೋಚಿಮುಲ್‌ಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಬೇಡಿಕೆ ಇಟ್ಟಿರುವುದರಿಂದ ಒಕ್ಕೂಟ ಪ್ರತ್ಯೇಕವಾದರೆ ಸ್ಪರ್ಧಾತ್ಮಕವಾಗಿ ಬೆಳೆಯಲು ಸಾಧ್ಯ. ರಚನಾತ್ಮಕ ದೃಷ್ಟಿಕೋನದಲ್ಲಿ ನೋಡಿದವರಿಗೆ ಇದು ಅರ್ಥವಾಗುತ್ತದೆ. ರಾಜಕೀಯ ಪರದೆ ಹಿಂದೆ ನಿಂತು ನೋಡಿದರೆ ಅರ್ಥವಾಗುವುದಿಲ್ಲ’ ಎಂದು ಪರೋಕ್ಷವಾಗಿ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರ ವಿರುದ್ಧ ಹರಿಹಾಯ್ದರು.

‘ಕೋಲಾರ ಜಿಲ್ಲೆಯಲ್ಲಿ ಇರುವಷ್ಟೇ ಸೊಸೈಟಿಗಳೂ ಚಿಕ್ಕಬಳ್ಳಾಪುರದಲ್ಲೂ ಇವೆ. ಹಾಲು ಉತ್ಪಾದನೆ ಪ್ರಮಾಣ ಸಹ ಸಮವಾಗಿದೆ. ಜಿಲ್ಲೆ ಪ್ರತ್ಯೇಕವಾಗಿ 14 ವರ್ಷಗಳಾಗಿವೆ. ಹೀಗಾಗಿ ಹಾಲು ಒಕ್ಕೂಟದ ಪ್ರತ್ಯೇಕತೆ ಬಗ್ಗೆ ಮಾತನಾಡಿದ್ದೇನೆ. ಮೆಗಾ ಡೇರಿ ಸೇರಿದಂತೆ ಯಾವುದಕ್ಕೂ ತೊಂದರೆ ಆಗುವುದಿಲ್ಲ. ನ್ಯಾಯಯುತವಾಗಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಲ್ಲಬೇಕಿರುವುದನ್ನು ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.