ADVERTISEMENT

ಕೋಲಾರ | ಕ್ರಿಸ್‌ಮಸ್‌ ಸಂಭ್ರಮ; ಯೇಸುವಿನ ಸ್ಮರಣೆ

ಜಿಲ್ಲೆಯಾದ್ಯಂತ ಚರ್ಚ್‌ಗಳಲ್ಲಿ ಪ್ರಾರ್ಥನೆ, ಕ್ರಿಸ್‌ಮಸ್ ಗೀತೆಗಳ ಗಾಯನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:12 IST
Last Updated 25 ಡಿಸೆಂಬರ್ 2025, 7:12 IST
ಕೋಲಾರದ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಸೋಮವಾರ ಪ್ರಾರ್ಥನೆ ಸಲ್ಲಿಸಲು ಬಂದಿದ್ದು ಕ್ರೈಸ್ತ ಸಮುದಾಯದವರು
ಕೋಲಾರದ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಸೋಮವಾರ ಪ್ರಾರ್ಥನೆ ಸಲ್ಲಿಸಲು ಬಂದಿದ್ದು ಕ್ರೈಸ್ತ ಸಮುದಾಯದವರು   

ಕೋಲಾರ: ಜಿಲ್ಲೆಯಾದ್ಯಂತ ಕ್ರೈಸ್ತ ಸಮುದಾಯದವರು ‌ಸೋಮವಾರ ಶ್ರದ್ಧಾ–ಭಕ್ತಿಯಿಂದ ಕ್ರಿಸ್‌ಮಸ್‌ ಹಬ್ಬ ಆಚರಿಸಿದರು. ಶಾಂತಿಧೂತ ಯೇಸು ಸ್ಮರಿಸಿ ಪ್ರಾರ್ಥನೆ ಸಲ್ಲಿಸಿದರು.

ಚರ್ಚ್‌ಗಳಲ್ಲಿ ಪ್ರಾರ್ಥನೆ, ಕ್ರಿಸ್‌ಮಸ್ ಗೀತೆಗಳ ಗಾಯನ, ಮನೆ ಮನೆಗಳಲ್ಲಿ ಯೇಸುವಿನ ಸ್ಮರಣೆ ಮಾಡಲಾಯಿತು. ಕೇಕ್ ಹಾಗೂ ಸಿಹಿತಿಂಡಿ ಹಂಚುವ ಮೂಲಕ ಶುಭಾಶಯ ಕೋರಲಾಯಿತು. ಮಕ್ಕಳು ಸಾಂಟಾ ಕ್ಲಾಸ್‌ ವೇಷ ಧರಿಸಿ ಸಂಭ್ರಮಿಸಿದರು. ಹಬ್ಬದ ಪ್ರಯುಕ್ತ ಚರ್ಚ್‍ಗಳನ್ನು ವಿಶೇಷವಾಗಿ ದೀಪಾಲಂಕಾರ ಮಾಡಲಾಗಿತ್ತು.

ಭಾನುವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು.

ADVERTISEMENT

ಸೋಮವಾರ ಬೆಳಿಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚ್‍ಗಳಿಗೆ ತೆರಳಿದ ಕ್ರೈಸ್ತರು ಯೇಸು ಕ್ರಿಸ್ತನ ಶಿಲುಬೆ ಹಾಗೂ ಸಂತ ಮೇರಿಯಮ್ಮನ ಮೂರ್ತಿ ಎದುರು ನಿಂತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಾಧ್ಯಕ್ಷರ ಸಮ್ಮುಖದಲ್ಲಿ ಪ್ರಾರ್ಥನೆ ನಡೆಯಿತು.

ಮನೆ ಮತ್ತು ಚರ್ಚ್‍ಗಳಲ್ಲಿ ಹಾಗೂ ಮಿಷನರಿ ಶಾಲೆಗಳಲ್ಲಿ ಹಬ್ಬದ ಸಡಗರ ಕಳೆಗಟ್ಟಿತ್ತು. ಮನೆಯಲ್ಲಿ ಹೊಸ ಬಟ್ಟೆ ತೊಟ್ಟು, ಹಾಡು ಹೇಳಿ ಹಬ್ಬ ಆಚರಿಸಿದರು. ಮನೆಗಳಲ್ಲಿ ಕ್ರಿಸ್‌ಮಸ್ ಟ್ರೀ ಹಾಗೂ ನಕ್ಷತ್ರ ಆಕೃತಿಯ ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದರು.

ನಗರದ ಮೆಥೋಡಿಸ್ಟ್ ಹಾಗೂ ಸಂತ ಮೇರಿಯಮ್ಮ ಚರ್ಚ್‍ಗಳಿಗೆ ಹಬ್ಬದ ಪ್ರಯುಕ್ತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲಂಕಾರಿಕ ಕ್ರಿಸ್‌ಮಸ್‌ ಟ್ರೀಗಳ್ ಚರ್ಚ್‍ನ ಸೌಂದರ್ಯ ಇಮ್ಮಡಿಗೊಳಿಸಿದವು. ಸಂತ ಮೇರಿಯಮ್ಮ ಚರ್ಚ್‍ನಲ್ಲಿ ಸಮುದಾಯದವರು ಮೇಣದ ಬತ್ತಿ ಹಚ್ಚಿ ಭಕ್ತಿ ಪ್ರದರ್ಶಿಸಿದರು.

‌ಬೆತ್ತನಿ, ಈಲಂ, ಮಂಗಸಂದ್ರ, ನಡುಪಲ್ಲಿ, ಚಿನ್ನಾಪುರ, ವೇಮಗಲ್, ವಕ್ಕಲೇರಿ ಹಾಗೂ ಹರಳಕುಂಟೆ ಗ್ರಾಮದ ಚರ್ಚ್‍ಗಳಲ್ಲೂ ಕ್ರಿಸ್‍ಮಸ್ ಆಚರಣೆ ಅದ್ದೂರಿಯಾಗಿ ನಡೆಯಿತು. ಬಹುತೇಕ ಚರ್ಚ್‍ಗಳಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಪ್ರಾರ್ಥನೆ ನಡೆಯಿತು. ಬೈಬಲ್ ಪಠಿಸಲಾಯಿತು.

ಬಹುತೇಕ ಚರ್ಚ್‌ಗಳಲ್ಲಿ ಯೇಸು ಹುಟ್ಟಿದಾಗಿನಿಂದ ಹಿಡಿದು ಶಿಲುಬೆಗೆ ಏರಿಸುವ ತನಕ ಸಾಗಿಬಂದ ಬದುಕಿನ ಕಥನ ಹೇಳುವ ಗೋದಲಿ ನಿರ್ಮಾಣ ಮಾಡಲಾಗಿತ್ತು. ಅವುಗಳಿಗೆ ಬಣ್ಣಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮಕ್ಕಳು ಗೋದಲಿಗಳ ಸುತ್ತ ಸುತ್ತಾಡಿ ಸಂಭ್ರಮಿಸಿದರು.

ಬೇಕರಿಗಳಲ್ಲಿ ಹಬ್ಬಕ್ಕಾಗಿಯೇ ವಿವಿಧ ರೀತಿಯ ಕೇಕ್‍ ಸಿದ್ಧಪಡಿಸಲಾಗಿದ್ದು, ವ್ಯಾಪಾರವೂ ಜೋರಾಗಿತ್ತು. ಮಹಿಳೆಯರು ಮನೆಗಳಲ್ಲಿ ವಿಶೇಷ ಭಕ್ಷ್ಯ ಸಿದ್ಧಪಡಿಸಿದ್ದರು.

ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಧರ್ಮಗುರುಗಳನ್ನು ಭೇಟಿಯಾಗಿ ಶುಭಾಶಯ ಕೋರಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌,‌ ಶಾಸಕ ಕೊತ್ತೂರು ಜಿ.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ‌ಎಂ.ಎಲ್.ಅನಿಲ್‌ ಕುಮಾರ್‌, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ನಂದಿನಿ ಪ್ರವೀಣ್‌ ನಗರದ ಮೆಥೋಡಿಸ್ಟ್ ಚರ್ಚ್ ಮತ್ತು ಮೇರಿ ಚರ್ಚ್‌ಗೆ ಭೇಟಿ ನೀಡಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು.

ಕೋಲಾರದ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಸೋಮವಾರ ಕ್ರಿಸ್‌ಮಸ್‌ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆದವು
ಕೋಲಾರ ಹೊರವಲಯದ ಬೆತ್ತನಿ ಗ್ರಾಮದಲ್ಲಿ ಕ್ರಿಸ್‌ಮಸ್‌ ಆಚರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.