ಮುಳಬಾಗಿಲು: ‘ರಾಜ್ಯದಲ್ಲಿ ಎಲ್ಲಾ ಹಂತದಲ್ಲೂ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಬೇಕಿದೆ’ ಎಂದು ಶಾಸಕ ಎಚ್. ನಾಗೇಶ್ ನುಡಿದರು.
ನಗರದ ನೇತಾಜಿ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಗಡಿ ಭಾಗದಲ್ಲಿ ಜನರು ಬೇರೆ ಭಾಷೆಯಲ್ಲಿ ಮಾತನಾಡುವ ಬದಲು ಕನ್ನಡ ಭಾಷೆಯಲ್ಲಿಯೇ ಮಾತಾಡಬೇಕು ಎಂದು ತಾಕೀತು ಮಾಡಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಕೆ.ಆರ್. ವೆಂಕಟೇಶ್, ಕನ್ನಡ ಭಾಷೆಗೆ ಎರಡು ಸಾವಿರದ ಐನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕನ್ನಡ ಭಾಷೆಯನ್ನು ತುಳಿಯಲು ಹುನ್ನಾರ ನಡೆಯುತ್ತಿದ್ದು ಕನ್ನಡಿಗರು ಎಚ್ಚರಿಕೆಯಿಂದ ಇರಬೇಕು ಎಂದರು.
ರಾಜ್ಯದ ರಾಜಧಾನಿಯಲ್ಲೇ ಅನ್ಯ ಭಾಷಿಕರ ಹಾವಳಿಯಿಂದ ಕನ್ನಡ ತತ್ತರಿಸುವಂತಾಗಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಶೇ 10ರಷ್ಟು ಮೀಸಲಾತಿ ನೀಡುವ ವಿಧೇಯಕವನ್ನು ಜಾರಿಗೆ ತರಲು ಮುಂದಾಗಿರುವುದು ಶ್ಲಾಘನೀಯವಾದುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ರಿಯಾಜ್ ಅಹ್ಮದ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ.ಸರ್ವೆಶ್, ಡಿವೈಎಸ್ಪಿ ಜೈಶಂಕರ್, ತಹಶೀಲ್ದಾರ್ ಶೋಭಿತಾ, ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾರಾಮಯ್ಯ, ನಗರಸಭೆ ಅಧಿಕಾರಿ ಸುಮಾ, ಹೋರಾಟಗಾರರಾದ ಶಂಕರ್ ಕೇಸರಿ, ಹರೀಶ್, ನಗರಸಭೆ ಸದಸ್ಯ ಜುಬಿ, ಎನ್ಸಿಸಿ ಅಧಿಕಾರಿ ಎಂ. ಶಂಕರ್ ಇದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.