ಮಾಲೂರು: ‘ಚಳಿ, ಗಾಳಿ, ಮಳೆ ಎನ್ನದೆ ಆರೋಗ್ಯ ಸಹ ಲೆಕ್ಕಿಸದೆ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರ ಪರವಾಗಿ ಸರ್ಕಾರಗಳು ಯಾವುದೇ ಸೌಲಭ್ಯ ನೀಡುತ್ತಿಲ್ಲ’ ಎಂದು ಪುರಸಭೆ ಅಧ್ಯಕ್ಷ ಎನ್.ವಿ. ಮುರಳೀಧರ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರಿಗೆ ಕೊರೊನಾ ವಾರಿಯರ್ಸ್ ಎಂಬ ಹೆಸರು ಬಿಟ್ಟರೆ ಸರ್ಕಾರ ಯಾವುದೇ ವಿಶೇಷ ಪ್ಯಾಕೇಜ್ ನೀಡದಿರುವುದು ಬೇಸರದ ಸಂಗತಿ. ಕೋವಿಡ್ ಸಮಯದಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿರುವ ಕಾರ್ಮಿಕರನ್ನು ಗುರುತಿಸಿ ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸಿ ಅವರ ಮಕ್ಕಳ ಮತ್ತು ಕುಟುಂಬಗಳ ಏಳಿಗೆಗೆ ಸಹಕಾರ ನೀಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ನಜೀರ್ ಅಹಮದ್ ಮಾತನಾಡಿ, ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವವರು ಕೆಲಸದ ಜತೆಗೆ ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಉತ್ತಮ ಆರೋಗ್ಯ ಪಡೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಮಿಕರಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಅಲ್ಲದೆ ಅವರ ಕುಟುಂಬ ವರ್ಗದವರಿಗೂ ಆರೋಗ್ಯ ತಪಾಸಣೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಲಾಗುವುದು. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ನಡೆಸಬೇಕು
ಎಂದರು.
ಉಪಾಧ್ಯಕ್ಷೆ ಭಾರತಿ ಶಂಕರಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎನ್. ಪರಮೇಶ್, ಸದಸ್ಯರಾದ ಎಂ.ವಿ. ವೇಮನ, ಇಮ್ತಿಯಾಜ್ ಖಾನ್, ಸಿ.ಬಿ. ಭಾನುತೇಜ, ಮುನಿರಾಜು, ವಿಜಯಲಕ್ಷ್ಮಿ, ಭವ್ಯಾ ಶಂಕರ್, ಚೈತ್ರಾ ರವಿಕುಮಾರ್, ಪಿ. ಹೇಮಾ, ಕೋಮಲಾ, ಲಕ್ಷ್ಮೀಕಾಂತ್, ಕಂದಾಯ ಅಧಿಕಾರಿ ಕೆ.ಜಿ. ರಮೇಶ್, ಲೆಕ್ಕಾಧಿಕಾರಿ ಮಲ್ಲೇಶ್, ವ್ಯವಸ್ಥಾಪಕಿ ಮುಕ್ತಿಯಾರ್, ಎಂಜಿನಿಯರ್ಗಳಾದ ಸಿ.ಡಿ. ಮಂಜುನಾಥ್, ಎಂ. ಶಾಲಿನಿ, ಬಿ.ಆರ್. ವೆಂಕಟೇಶ್, ನಾಗರಾಜ್, ಎಂ.ಆರ್. ಗೀತಾ, ಎ. ರವಿ, ವೆಂಕಟೇಶ್ ಸೇರಿದಂತೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.