ಕೋಲಾರ: ಆಗ್ನೇಯ ಶಿಕ್ಷಕರ ಕ್ಷೇತ್ರದ ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್ನ ಡಿ.ಟಿ.ಶ್ರೀನಿವಾಸ್ ಅವರನ್ನು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ರಾಜ್ಯ ಸಮಿತಿ ಅಭಿನಂದಿಸಿದೆ.
‘ಈ ಹಿಂದೆ ಆಯ್ಕೆಯಾಗಿದ್ದ ವೈ.ಎ.ನಾರಾಯಣಸ್ವಾಮಿ ಅವರ ಅಹಂ ಅವರನ್ನು ಸೋಲುವಂತೆ ಮಾಡಿದೆ. ಎಂದಿಗೂ ನಮ್ಮ ಸಮಸ್ಯೆಗಳ ಬಗ್ಗೆ ಅವರು ಚಕಾರ ಎತ್ತಲಿಲ್ಲ. ನಮ್ಮ ವೇತನ ಹೆಚ್ಚಿಸುವ ವಿಚಾರದಲ್ಲಿ ಕಾಯಂ ವಿಚಾರದಲ್ಲಿ ಸದನದಲ್ಲಿ ಧ್ವನಿ ಎತ್ತಲಿಲ್ಲ. ಈ ಬಗ್ಗೆ ನಮ್ಮ ಒಕ್ಕೂಟವು ಒಂದು ತಿಂಗಳು 20 ದಿನ ನೀರಾವರಿ ಹೋರಾಟ ವೇದಿಕೆಯಲ್ಲಿ ಮುಷ್ಕರ ಹೂಡಿತ್ತು. ಕನಿಷ್ಠ ವೇದಿಕೆ ಬಳಿ ಬಂದು ನಮಗೆ ಸಾಂತ್ವನ ಹೇಳಲಿಲ್ಲ’ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
‘ಈ ಎಲ್ಲಾ ಕಾರಣಗಳಿಗಾಗಿ ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ನಮ್ಮ ಒಕ್ಕೂಟ ಬಹಿರಂಗವಾಗಿ ಡಿ.ಟಿ.ಶ್ರೀನಿವಾಸ ಅವರನ್ನು ಬೆಂಬಲಿಸಿತ್ತು. ಇತರೆ ಶಿಕ್ಷಕರು ಮತ್ತು ಉಪನ್ಯಾಸಕರ ಬೆಂಬಲದಿಂದ ಅವರು ಆಯ್ಕೆಯಾಗಿದ್ದಾರೆ’ ಎಂದಿದೆ.
‘ಇವರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಷತ್ತಿನಲ್ಲಿ ಶಿಕ್ಷಕರ ಬಗ್ಗೆ ಮತ್ತು ರಾಜ್ಯದ ಅತಿಥಿ ಉಪನ್ಯಾಸಕರು ಹೋರಾಟ ಮಾಡುತ್ತಿರುವ ಕಾಯಂಗೆ ಬೆಂಬಲ ನೀಡಬೇಕು’ ಎಂದು ಸಮಿತಿ ರಾಜ್ಯ ಅಧ್ಯಕ್ಷ ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಾಳ ಮುನಿಯಪ್ಪ, ರಾಜ್ಯ ಗೌರವಾಧ್ಯಕ್ಷ ಶ್ರೀನಿವಾಸ್, ರಾಜ್ಯ ಖಜಾಂಚಿ ತೋಕಲಕಟ್ಟ ರವಿ, ಮಹಿಳಾ ಒಕ್ಕೂಟದ ಸಿ.ಎಂ.ನಾಗಮಣಿ, ಸರಿತಾ ಕುಮಾರಿ, ವೇಣು, ಮಣಿ, ಸಿದ್ದರಾಜು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.