ADVERTISEMENT

50 ಸಾವಿರ ಕೋಟಿ ಖರ್ಚಾದರೂ ಎತ್ತಿನಹೊಳೆಯಿಂದ ನೀರು ತರಲಾಗಲ್ಲ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 17:12 IST
Last Updated 18 ಆಗಸ್ಟ್ 2021, 17:12 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಕೋಲಾರ:ಮಹಾನಾಯಕ ರಮೇಶ್‌ಕುಮಾರ್ ಎತ್ತಿನಹೊಳೆ ಯೋಜನೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ 3 ವರ್ಷದಲ್ಲಿ ನೀರು ಹರಿಸುತ್ತೀನಿ ಎಂದಿದ್ದರು. ಆದರೆ, ಈಗ ಈ ಯೋಜನೆ ಏನಾಗಿದೆ ಎಂಬುದು ತಿಳಿದಿದೆಯೇ? ಎತ್ತಿನಹೊಳೆ ದುಡ್ಡು ಹೊಡೆಯುವ ಯೋಜನೆಯಾಗಿದೆ. ಈ ಯೋಜನೆಗೆ 50 ಸಾವಿರ ಕೋಟಿ ಖರ್ಚು ಮಾಡಿದರೂ ಅವಿಭಜಿತ ಜಿಲ್ಲೆಗೆ ನೀರು ತರಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

‘ಎತ್ತಿನಹೊಳೆ ಯೋಜನೆ ಬಗ್ಗೆ ಹಿಂದೆಯೇ ನಾನು, ರಮೇಶ್‌ಕುಮಾರ್‌ ಕೋಲಾರ ಮತ್ತು -ಚಿಕ್ಕಬಳ್ಳಾಪುರ ಜನರ ಹೆಸರಿನಲ್ಲಿ ದುಡ್ಡು ಹೊಡೆಯುವ ಯೋಜನೆ ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ಅದೇ ಪ್ರಕಾರ ಯೋಜನಾ ವೆಚ್ಚ ₹ 8 ಸಾವಿರ ಕೋಟಿಯಿಂದ 12 ಸಾವಿರ ಕೋಟಿಗೆ ಏರಿಕೆಯಾಗಿತ್ತು. ಇದೀಗ ₹ 20 ಸಾವಿರ ಕೋಟಿ ದಾಟಿದೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಯೋಜನೆ ಘೋಷಣೆಯಾಗಿ ಒಂದು ದಶಕವಾದರೂ ಕಾಮಗಾರಿಯಲ್ಲಿ ಏನು ಪ್ರಗತಿಯಾಗಿದೆ ಎಂಬುದನ್ನು ರಮೇಶ್‌ಕುಮಾರ್ ಗಮನಿಸಿದ್ದಾರಾ? ತುಮಕೂರು ಜಿಲ್ಲೆಯ ಬೈರಗೊಂಡ್ಲು ಬಳಿ 10 ಟಿಎಂಸಿ ನೀರು ಸಂಗ್ರಹಿಸಲು ಜಲಾಶಯ ನಿರ್ಮಿಸುವುದಾಗಿ ಹೇಳಿದ್ದರು. ಅರಣ್ಯ ಜಮೀನಿನ ಕಾರಣ ನೀಡಿ 5 ಟಿಎಂಸಿಗೆ ಹಾಗೂ ರೈತರಿಗೆ ಭೂಪರಿಹಾರ ನೀಡಬೇಕೆಂದು 2 ಟಿಎಂಸಿಗೆ ಇಳಿಸಿದ್ದಾರೆ’ ಎಂದು ಕುಟುಕಿದರು.

‘ರಮೇಶ್‌ಕುಮಾರ್ ಅವಳಿ ಜಿಲ್ಲೆಯಲ್ಲಿ ಏನು ಉದ್ಧಾರ ಮಾಡಿದ್ದಾರೆ? ಬೆಂಗಳೂರಿನ ಕೊಳಚೆ ನೀರು ತಂದಿರುವುದೇ ಅವರ ಸಾಧನೆ. ಜಿಲ್ಲೆಯ ಜನರ ಆರೋಗ್ಯ ಹಾಳು ಮಾಡುವ ಉದ್ದೇಶಕ್ಕಾಗಿಯೇ ಬೆಂಗಳೂರಿನ ಕೊಳಚೆ ನೀರು ತಂದಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.