
ಕೆಜಿಎಫ್: ನಗರಕ್ಕೆ ಕೊಳವೆಬಾವಿಗಳ ಮೂಲಕ ಬರಗಾಲದಲ್ಲಿ ನೀರು ಸರಬರಾಜು ಮಾಡುತ್ತಿದ್ದ ಬೇತಮಂಗಲ ಗೋಷನ ಕೆರೆಯನ್ನು ಸರ್ಕಾರಿ ರಜಾ ದಿನದಂದು ಭೂ ಮಾಫಿಯಾಗಳು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಿದ ಘಟನೆ ನಡೆದಿದೆ.
ಬೇತಮಂಗಲ-ಕೆಜಿಎಫ್ ಹೆದ್ದಾರಿ ಪಕ್ಕದಲ್ಲಿಯೇ ಇರುವ ಕೆರೆಯಲ್ಲಿ ರಾಜಾರೋಷವಾಗಿ ಹಳೇ ಕಟ್ಟಡಗಳ ನೂರಾರು ಲೋಡ್ ಮಣ್ಣನ್ನು ತಂದು ಸುರಿಯಲಾಗಿದೆ. ರಾಜಕಾಲುವೆಯನ್ನು ಸಹ ಮುಚ್ಚಲಾಗಿದೆ. ಮಣ್ಣನ್ನು ನಂತರ ಜೆಸಿಬಿ ಮೂಲಕ ಸಮತಟ್ಟು ಮಾಡಲಾಗಿದೆ. ಇಷ್ಟೆಲ್ಲಾ ಕಾಮಗಾರಿಗಳು ನಡೆಯುತ್ತಿದ್ದರೂ, ಕೆರೆ ಉಳಿಸುವ ಇರಾದೆಯನ್ನು ಸರ್ಕಾರದ ಯಾವುದೇ ಇಲಾಖೆ ನಿರ್ವಹಿಸಿಲ್ಲ. ಕೆಲ ಸಾರ್ವಜನಿಕರು ದೂರು ನೀಡಿದರೂ, ರಜೆ ಇದೆ ಎಂಬ ಕಾರಣವೊಡ್ಡಿ ಅಧಿಕಾರಿಗಳು ಮೌನವಾಗಿದ್ದರು ಎಂದು ದೂರಲಾಗಿದೆ.
ಈಚೆಗೆ ಬಿದ್ದ ಮಳೆಯಿಂದಾಗಿ ಗೋಷನ ಕೆರೆ ಕೋಡಿ ಹೋಗಿತ್ತು. ಇನ್ನೂ ಸಹ ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಇದೆ. ಇದರಿಂದಾಗಿ ಅಂತರ್ಜಲ ಹೆಚ್ಚಳವಾಗಿದೆ. ಐಯ್ಯಪ್ಪನಹಳ್ಳಿ, ನಾಗಶೆಟ್ಟಿಹಳ್ಳಿ, ಅರಪನಹಳ್ಳಿ, ಚಿಗಿರಾಪುರ ಈ ಗ್ರಾಮಗಳ ಕೆರೆ ನೀರು ಗೋಷನ ಕೆರೆಗೆ ಬರುತ್ತದೆ. ಗೋಷನ ಕೆರೆ ಮತ್ತು ಪರಸನ ಕೆರೆ ಅಕ್ಕಪಕ್ಕದಲ್ಲಿದ್ದು, ಎರಡು ಸರ್ವೆ ನಂಬರ್ ನಲ್ಲಿ ಇದೆ. ಗೋಷನ ಕೆರೆ ೫೭.೧೦ ಎಕರೆ ಜಮೀನು ಇದ್ದು, ಪರಸನಕೆರೆ ೧೨ ಎಕರೆ ಇದೆ.
ಗೋಷನ ಕೆರೆ ನಿರಂತರವಾಗಿ ಒತ್ತುವರಿಯಾಗುತ್ತಲೇ ಬಂದಿದೆ. ಅದರ ಅಂಚಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕಟ್ಟಡಗಳನ್ನು ಕಟ್ಟಲಾಗಿದೆ ಎಂಬ ದೂರುಗಳು ಸಹ ಕೇಳಿ ಬಂದಿದ್ದವು. ಈ ಬಗ್ಗೆ ತನಿಖೆ ಕೂಡ ನಡೆದಿದ್ದವು. ಈಚೆಗೆ ಕೆರೆಯ ಸರ್ವೆ ಮಾಡಿ ಗಡಿಯನ್ನು ಗುರ್ತಿಸಿಕೊಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ಹೇಳುತ್ತಾರೆ.
ಕೆರೆಯನ್ನು ಸರ್ವೆ ಮಾಡಿ ಗಡಿ ಗುರ್ತಿಸಿಕೊಟ್ಟು ಉಸ್ತುವಾರಿಗಾಗಿ ಬೇತಮಂಗಲ ಪಂಚಾಯಿತಿಗೆ ನೀಡಲಾಗಿದೆ. ಕೆರೆಯ ಒತ್ತುವರಿಯಾದಲ್ಲಿ ಅದನ್ನು ತೆರವುಗೊಳಿಸುವುದು ಪಂಚಾಯಿತಿ ಜವಾಬ್ದಾರಿ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಜಾ ದಿನಗಳಲ್ಲಿ ಅಕ್ರಮವಾಗಿ ಮಣ್ಣು ಸುರಿದು ರಸ್ತೆ ನಿರ್ಮಾಣ ಮಾಡಲಾಗಿದೆ. ಕೆರೆಯ ಆಜುಬಾಜಿನಲ್ಲಿರುವವರನ್ನು ಕರೆದು ವಿಚಾರಿಸಲಾಗಿದೆ. ಅವರು ತಮ್ಮ ಕೃತ್ಯ ಅಲ್ಲ ಎಂದು ಸಮಾಜಾಯಿಸಿ ನೀಡಿದ್ದಾರೆ. ಕೂಡಲೇ ಒತ್ತುವರಿಯನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಂತರ ಕೆರೆಯ ಸ್ವರೂಪಕ್ಕೆ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಲಾಗುವುದು ಎಂದು ಬೇತಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಕುಮಾರ್ ತಿಳಿಸಿದ್ದಾರೆ.
೨೪ ಕೆಜಿಎಫ್ ೧
೨೪ ಕೆಜಿಎಫ್ ೨
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.