ಕೋಲಾರ: ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ ಏ.1ರಿಂದ ಗೂಡು ಮಾರಾಟ ಮಾಡಿರುವ ರೈತರಿಗೆ ಸರ್ಕಾರ ಪ್ರೋತ್ಸಾಹಧನ ಬಿಡುಗಡೆ ಮಾಡಿದ್ದು, ಫಲಾನುಭವಿಗಳು ಸೂಕ್ತ ದಾಖಲೆಪತ್ರ ಸಲ್ಲಿಸಿ ಸಹಾಯಧನ ಪಡೆಯಬೇಕು ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ಜಿ ಮಿಶ್ರತಳಿ ರೇಷ್ಮೆ ಗೂಡಿಗೆ ₹ 30, ದ್ವಿತಳಿ ರೇಷ್ಮೆ ಗೂಡಿಗೆ ₹ 50 ಪ್ರೋತ್ಸಾಹಧನ ಪಡೆಯಲು ಅವಕಾಶವಿದೆ. ಈ ವರ್ಷದ ಏ.1ರಿಂದ ವಹಿವಾಟು ಆದ ರೇಷ್ಮೆ ಗೂಡಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಪ್ರತಿ 100 ಮೊಟ್ಟೆಗೆ 60 ಕೆ.ಜಿ ಇಳುವರಿ ಪಡೆದಿರಬೇಕು. ಮಿಶ್ರತಳಿ ಗೂಡು ಪ್ರತಿ ಕೆ.ಜಿಗೆ ₹ 300 ಹಾಗೂ ದ್ವಿತಳಿ ಗೂಡು ಪ್ರತಿ ಕೆ.ಜಿಗೆ ₹ 350ಕ್ಕಿಂತ ಕಡಿಮೆ ದರಕ್ಕೆ ಮಾರಾಟವಾಗಿರಬೇಕು. ಅಂತಹ ಬೆಳೆಗಾರರು ಮಾತ್ರ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರೋತ್ಸಾಹಧನ ಪಡೆಯಲು ಮಾರುಕಟ್ಟೆ ಹರಾಜು ಚೀಟಿಯ ಮೂಲ ಪ್ರತಿ, ಮೊಟ್ಟೆ ಅಥವಾ ಚಾಕಿ ಪಡೆದ ರಶೀದಿ, ಇಲಾಖೆ ಪಾಸ್ ಪುಸ್ತಕದ ಪ್ರತಿ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಆಧಾರ್ ಕಾರ್ಡ್ ಪ್ರತಿಯನ್ನು ಹತ್ತಿರದ ತಾಂತ್ರಿಕ ಸೇವಾ ಕೇಂದ್ರಕ್ಕೆ ಸಲ್ಲಿಸಿ ಹಣ ಪಡೆದುಕೊಳ್ಳಬಹುದು ಎಂದು ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.