ಕೋಲಾರ: ‘ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವ ವಿಶ್ವಾಸವಿದೆ, ಇಲ್ಲಿ ಅನರ್ಹ ಶಾಸಕರು ವಂಚನೆಗೆ ಒಳಗಾಗಲು ಬಿಡುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅತೃಪ್ತ ಶಾಸಕರ ಮೇಲೆ ನನಗೆ ಅನುಕಂಪ ಇದೆ. ಬಿಜೆಪಿ 105 ಶಾಸಕರನ್ನು ಒಳಗೊಂಡಿದ್ದು, ಉಪ ಚುನಾವಣೆಯ ಸಿದ್ದತೆ ನಡೆಯುತ್ತಿದೆ. ಇನ್ನೂ ಮೂರೂವರೆ ವರ್ಷ ಬಜೆಪಿ ಸರ್ಕಾರ ಸುಭದ್ರವಾಗಿರುತ್ತದೆ’ ಎಂದು ಹೇಳಿದರು.
‘ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಸದನದ ಒಳಗೆ ಪರಸ್ಪರ ಟೀಕೆಗಳನ್ನು ಮಾಡಿದರೂ ಹೊರಗೆ ಬಂದ ಮೇಲೆ ಎಲ್ಲರೂ ಒಂದೇ. ಯಾವುದನ್ನೂ ನಂಬಬೇಡಿ’ ಎಂದು ತಿಳಿಸಿದರು.
‘ಮುುಂದಿನ 15 ದಿನಗಳ ಒಳಗೆ ಎಲ್ಲ ಶಾಸಕರನ್ನೊಳಗೊಂಡು ಜಿಲ್ಲಾ ಮಟ್ಟದಲ್ಲಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಜಿಲ್ಲೆಯ ಅಭಿವೃದ್ಧಿಗೆ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಲಾಗುವುದು. ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಕ್ತಿ ಮೀರಿ ಕೆಲಸ ಮಾಡಲಾಗುವುದು’ ಎಂದರು.
ಕಾಂಗ್ರೆಸ್ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಚಿವ ಎಚ್.ನಾಗೇಶ್, ‘ಇಡೀ ದೇಶದಲ್ಲಿ ಐಟಿ ದಾಳಿ ನಡೆಯುತ್ತಿದೆ. ಇಲಾಖೆ ಇರೋದೇ ಅದಕ್ಕೆ, ಅವರ ಕರ್ತವ್ಯ ಮಾಡಬೇಕಲ್ಲವೇ, ಯಾಕೆ ಏನು ಎಂದು ಹೇಳಲು ಸಾಧ್ಯವಿಲ್ಲ. ಒಂದು ಪಕ್ಷ ಇನ್ನೊಂದು ಪಕ್ಷದ ವಿರುದ್ದ ಅರೋಪ ಮಾಡುವುದು ಸಹಜವಾದ್ದರಿಂದ ಕಾಂಗ್ರೆಸ್ ಅರೋಪವೂ ಸಹಜವೇ’ ಎಂದು ಪ್ರತಿಕ್ರಿಯಿಸಿದರು.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ತುಂಬ ಬುದ್ದಿವಂತ. ಕೆಲ ವಿಚಾರಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುತ್ತಿದ್ದ. ಈ ರೀತಿ ಆಗಬಾರದಾಗಿತ್ತು, ದುರ್ಬಲ ಮನಸ್ಸಿವರು ಅವಮಾನಗಳಾದಾಗ ಸಹಿಸಿಕೊಳ್ಳುವುದಿಲ್ಲ. ಕಷ್ಟ ಇದ್ದಾಗ ಹಂಚಿಕೊಳ್ಳಬೇಕಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.