ಮುಳಬಾಗಿಲು: ನಗರದಲ್ಲಿ ಸಾರ್ವಜನಿಕರು, ನಿವೃತ್ತ ಯೋಧರು ಹಾಗೂ ವಿದ್ಯಾರ್ಥಿಗಳು ನಗರದ ಅಂಬೇಡ್ಕರ್ ವೃತ್ತದಿಂದ ಕಿಬಿ ವೃತ್ತದವರೆಗೂ ತ್ರಿವರ್ಣ ಧ್ವಜಗಳನ್ನು ಹಿಡಿದು ದೇಶ ಹಾಗೂ ಸೈನಿಕರಿಗೆ ಜಯಕಾರ ಕೂಗಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿದರು.
ನೂರಾರು ವಿದ್ಯಾರ್ಥಿಗಳು, ಸೈನಿಕರು ಹಾಗೂ ಸಾರ್ವಜನಿಕರು ಮೆರವಣಿಗೆ ಮೂಲಕ ಸಾಗಿ ಸೈನಿಕರಿಗೆ ಗೌರವ ಸಲ್ಲಿಸಿದರು. ನೇತಾಜಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ ಮಾಡಲಾಯಿತು.
ನಂಗಲಿ ಕೆ.ಸತೀಶ್ ಕುಮಾರ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಸೈನಿಕರು ತಮ್ಮ ಧೈರ್ಯ ಹಾಗೂ ಸಾಹಸಮಯ ಶಕ್ತಿಯಿಂದ ಪಾಕಿಸ್ತಾನವನ್ನು ಸೋಲಿಸಲಾಯಿತು. ದೇಶವನ್ನು ಶತ್ರುಗಳಿಂದ ರಕ್ಷಿಸುವುದರ ಜೊತೆಗೆ ಜನರ ರಕ್ಷಣೆ ಮಾಡುತ್ತಿರುವ ಸೈನಿಕರ ಸೇವೆಗೆ ಬೆಲೆ ಕಟ್ಟಲಾಗದು ಎಂದು ಹೇಳಿದರು.
ವಕೀಲ ವಿ.ಜಯಪ್ಪ ಮಾತನಾಡಿ, ಪ್ರಪಂಚದ ಮುಂದೆ ದೇಶದ ಸೈನಿಕರ ಶಕ್ತಿ ಏನೆಂಬುದನ್ನು ಇತ್ತೀಚೆಗೆ ನಡೆದ ಪುಲ್ವಾಮ ದಾಳಿಯಲ್ಲೂ ನಮ್ಮ ಸೈನಿಕರು ತೋರಿಸಿ ಕೊಟ್ಟಿದ್ದಾರೆ. ಆದರೆ ದೇಶದ ಒಳಗೆ ಅಸಮಾನತೆ ತಾಂಡವವಾಡುತ್ತಾ ಜಾತಿ ಮತಗಳ ನಡುವೆ ಭೇದಭಾವ ತೋರುತ್ತಿರುವುದು ದುಃಖದ ವಿಚಾರ ಎಂದು ಹೇಳಿದರು.
ಕೆ.ಸತೀಶ್ ಕುಮಾರ್, ಪಿ.ಎಂ.ರಘುನಾಥ್, ವಿ.ಜಯಣ್ಣ, ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.