ADVERTISEMENT

ಕೋಲಾರ| ಜಲಾವೃತಗೊಂಡ ಜಮೀನು: ಕೆ.ಸಿ.ವ್ಯಾಲಿ ಕಾಲುವೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 6:53 IST
Last Updated 10 ನವೆಂಬರ್ 2025, 6:53 IST
ಕೋಲಾರ ತಾಲ್ಲೂಕಿನ ಕುಡುವನಹಳ್ಳಿ ಗ್ರಾಮದಲ್ಲಿ ಕೆ.ಸಿ.ವ್ಯಾಲಿ ಸಮಸ್ಯೆ ಸಂಬಂಧ ನಡೆದ‌ ಸಾರ್ವಜನಿಕರ ಸಭೆಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬು‌ ಮಾತನಾಡಿದರು. ಜಿ.ಕೆ.ವೆಂಕಟಶಿವಾರೆಡ್ಡಿ, ‌ಸಿಎಂಆರ್ ಶ್ರೀನಾಥ್, ‌ಶೇಷಾಪುರ‌ ಗೋಪಾಲ್, ಶ್ರೀನಿವಾಸ್ ಹಾಗೂ ಗ್ರಾಮದ ಮುಖಂಡರು ‌ಪಾಲ್ಗೊಂಡಿದ್ದರು‌
ಕೋಲಾರ ತಾಲ್ಲೂಕಿನ ಕುಡುವನಹಳ್ಳಿ ಗ್ರಾಮದಲ್ಲಿ ಕೆ.ಸಿ.ವ್ಯಾಲಿ ಸಮಸ್ಯೆ ಸಂಬಂಧ ನಡೆದ‌ ಸಾರ್ವಜನಿಕರ ಸಭೆಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬು‌ ಮಾತನಾಡಿದರು. ಜಿ.ಕೆ.ವೆಂಕಟಶಿವಾರೆಡ್ಡಿ, ‌ಸಿಎಂಆರ್ ಶ್ರೀನಾಥ್, ‌ಶೇಷಾಪುರ‌ ಗೋಪಾಲ್, ಶ್ರೀನಿವಾಸ್ ಹಾಗೂ ಗ್ರಾಮದ ಮುಖಂಡರು ‌ಪಾಲ್ಗೊಂಡಿದ್ದರು‌   

ಕೋಲಾರ: ಅವೈಜ್ಞಾನಿಕ ಕಾಮಗಾರಿಯಿಂದ ಕೆ.ಸಿ.ವ್ಯಾಲಿ ಕಾಲುವೆಯಲ್ಲಿ ಹರಿಯುತ್ತಿರುವ ನೀರು ಉಕ್ಕಿ ಹರಿದು ಬೆಳೆಗಳು ನಾಶವಾಗಿದ್ದು, ರೈತರು ತೊಂದರೆಗೆ ಒಳಗಾಗಿದ್ದಾರೆ. ಕೂಡಲೇ ‌ಕಾಲುವೆ ನವೀಕರಣಗೊಳಿಸಬೇಕು ಎಂದು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಒತ್ತಾಯಿಸಿದರು.

ತಾಲ್ಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಡುವನಹಳ್ಳಿ ಗ್ರಾಮದಲ್ಲಿ‌ ಜಲಾವೃತವಾಗಿರುವ ಜಮೀನುಗಳನ್ನು ಭಾನುವಾರ ವೀಕ್ಷಿಸಿ ಸಾರ್ವಜನಿಕರ ಸಭೆ ‌ಉದ್ದೇಶಿಸಿ ಮಾತನಾಡಿದರು‌.

ಎಸ್.ಅಗ್ರಹಾರದಿಂದ ಮಣಿಘಟ್ಟ ಕೆರೆವರೆಗೆ ಕೆ.ಸಿ.ವ್ಯಾಲಿ ನೀರು ಹರಿಯುವ ಕಾಲುವೆಯನ್ನು ಸರ್ವೆ ಮಾಡಿ ನವೀಕರಣ‌ ಮಾಡಬೇಕು‌. ಕಾಲುವೆಗೆ 8 ಅಡಿ ಎತ್ತರದ‌ ತಡೆಗೋಡೆ ಹಾಗೂ ನೀರು ಸರಾಗವಾಗಿ ಹರಿಯಲು 30 ಅಡಿ ಅಗಲ ಮಾಡಬೇಕು ಎಂದು ಹೇಳಿದರು.

ADVERTISEMENT

ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದಾರೆ. ಮುಂದೆ ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ‌ ನೀಡಿದರು‌.

ಶ್ರೀನಿವಾಪುರ ತಾಲ್ಲೂಕಿನಲ್ಲಿ ಕೆ.ಸಿ.ವ್ಯಾಲಿ ನೀರು ಹರಿಸಲು ಹಲವು ಕಡೆ ಪೈಪ್‌ಲೈನ್‌ ಹಾಕಿದ್ದಾರೆ. ನಗರದಲ್ಲಿ ಯಾರಾದರೂ ಪೈಪ್‌ಲೈನ್‌ ಹಾಕುತ್ತಾರೆಯೇ? ಹಿಂದೆ ಸತತ ಎರಡು ಬಾರಿ ಶಾಸಕರಾದವರು ಕಾಲುವೆ ದುರಸ್ತಿ ಸಂಬಂಧ ಏಕೆ ಕ್ರಮ ವಹಿಸಲಿಲ್ಲ ಎಂದು ಪ್ರಶ್ನಿಸಿದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, 'ಕೆ.ಸಿ.ವ್ಯಾಲಿ ನೀರಿನಿಂದ ಹಾನಿಗೆ ಒಳಗಾಗಿರುವ ಜಮೀನು ಪರಿಶೀಲನೆ ಮಾಡಿದ್ದೇವೆ. ಕೆ.ಸಿ ವ್ಯಾಲಿ ನೀರು‌ ಹರಿಯಲು ಕಾಲುವೆ ಸರಿಪಡಿಸಬೇಕಿದೆ.‌ ಕಾಲುವೆ ಹದಗೆಟ್ಟಿರುವುದರ ಜೊತೆಗೆ ಮಳೆ ಬಂದು ಉಕ್ಕಿ ಜಮೀನಿಗೆ ಹರಿದಿದೆ. ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆ ಕಾಮಗಾರಿಯಲ್ಲಿ ಎಡವಟ್ಟಾಗಿದೆ' ಎಂದು ಹೇಳಿದರು.

ಈ ಭಾಗದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಮೂರು ತಿಂಗಳಲ್ಲಿ ಸರಿಪಡಿಸಲಾಗುವುದು ಎಂದು ಭರವಸೆ ‌ನೀಡಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, 'ಕೆ.ಸಿ.ವ್ಯಾಲಿಯಿಂದ ರೈತರ ಜಮೀನಿಗೆ‌ ಆಗಿರುವ ಹಾನಿಯನ್ನು ನೇರವಾಗಿ ಪರಿಶೀಲನೆ ನಡೆಸಲಾಗಿದೆ. ನೀರು ಹರಿಸುವ ಮುನ್ನ ಸಾಧಕ ಬಾಧಕ ಬಗ್ಗೆ ಗಮನ ಹರಿಸಬೇಕಿತ್ತು. ಸರಿಯಾದ ಕಾಲುವೆ ಇಲ್ಲದೆ ಹರಿಸಿ ರೈತರಿಗೆ ಸಮಸ್ಯೆ ತಂದೊಡ್ಡಿದ್ದಾರೆ. ನೀರು ರೈತರ ಜಮೀನುಗಳಿಗೆ‌ ನುಗ್ಗಿ ಅಪಾರ ನಷ್ಟಕ್ಕೆ ಕಾರಣವಾಗಿದೆ' ಎಂದರು.

ಶಾಸಕರು ‌ನ್ಯಾಯಾಲಯಕ್ಕೆ‌ ಹೋಗಿ ಅನುದಾನ ಪಡೆಯುವಂಥ ಪರಿಸ್ಥಿತಿಯನ್ನು ಈ ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಶೇಷಾಪುರ ಗೋಪಾಲ್ ಮಾತನಾಡಿ, 'ಅವೈಜ್ಞಾನಿಕವಾಗಿ ಕಾಲುವೆ ನಿರ್ಮಿಸಿ ನಾವೇ ಸೃಷ್ಟಿ ಮಾಡಿಕೊಂಡ ಸಮಸ್ಯೆ ಇದು. ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ‌ ಅನಾಹುತ ಆಗುತ್ತಿರಲಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳಷ್ಟೇ ಸಾರ್ವಜನಿಕರು ಜವಾಬ್ದಾರರು. ಕೆಲವರ ಸ್ವಾರ್ಥಕ್ಕಾಗಿ ಯೋಜನೆ ಮೂಲ ಸ್ವರೂಪ ಬದಲಾಯಿಸಿದ್ದೇ ಕಾರಣ‌. ಮುದುವಾಡಿ ಕೆರೆಯಿಂದ ನೂರು ವರ್ಷಗಳಿಂದ ಕೆರೆ ತುಂಬಿ‌ ಹರಿದಿದೆ. ಅವೈಜ್ಞಾನಿಕವಾಗಿ ಚೆಕ್ ಡ್ಯಾಮ್ ನಿರ್ಮಿಸಲಾಗಿದೆ . ಕಮಿಷನ್ ಗಾಗಿ ಮನಬದಂತೆ ಕಾಮಗಾರಿ ನಡೆಸಲಾಗಿದೆ' ಎಂದು ದೂರಿದರು.

ಈ ಸಂಬಂಧ‌ ಶಾಸಕ, ಸಂಸದರು ಸಣ್ಣ‌ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ಮಾತನಾಡಿದ್ದು, ಸಮಸ್ಯೆ ಸರಿ ಹೋಗುವ ವಿಶ್ವಾಸವಿದೆ ಎಂದರು.

ಕಾರ್ಯಕ್ರಮ ಆಯೋಜಕ ಶ್ರೀನಿವಾಸ್ ಮಾತನಾಡಿ, ಕೆ.ಸಿ.ವ್ಯಾಲಿ ನೀರು‌ ಉಕ್ಕಿ ಹರಿದು ರೈತರಿಗೆ ಆಗಿರುವ ಸಮಸ್ಯೆ ವಿವರಿಸಿದರು.

ಕೆ.ಸಿ.ವ್ಯಾಲಿ ಹೆಸರಲ್ಲಿ ರಮೇಶ್ ಕುಮಾರ್ ವಿನಾಕಾರಣ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಶಕ್ತಿ ಏನೆಂಬುದನ್ನು ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ತೋರಿಸುತ್ತೇವೆ.‌ ಮುಂದೆ ಸಮ್ಮಿಶ್ರ ಸರ್ಕಾರ ‌ಬರಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲ್ಲೂಕು ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ನಗರಸಭೆ ಸದಸ್ಯ ರಾಕೇಶ್, ಮುಖಂಡರಾದ ದಿಂಬ ನಾಗರಾಜಗೌಡ, ವಿಶ್ವನಾಥ್ ಗೌಡ, ರಾಮಚಂದ್ರೇಗೌಡ, ಕುಮಾರ್, ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಪ್ರಸನ್ನ,‌ ವೆಂಕಟೇಶ್ ಗೌಡ, ಕೇಶವ, ವೆಂಕಟೇಶ್, ರಘುನಾಥ್, ಮನೋಹರ್ ಸೋಮಣ್ಣ, ಸಂತೋಷ್ ಇದ್ದರು.

ಇದೇ 13ರಂದು ದಿಶಾ ಸಭೆ ಹಮ್ಮಿಕೊಳ್ಳಲಾಗಿದೆ. ಅಷ್ಟರೊಳಗೆ ಕಾಲುವೆ ದುರಸ್ತಿ ಸಂಬಂಧ ಕೆ.ಸಿ.ವ್ಯಾಲಿ ಅಧಿಕಾರಿಗಳು ಜಲಾವೃತ ಪ್ರದೇಶ ಪರಿಶೀಲನೆ ಮಾಡಿ ವರದಿ ಕೊಡಬೇಕು
ಎಂ.ಮಲ್ಲೇಶ್ ಬಾಬು ಸಂಸದ

3ನೇ ಹಂತದ ಶುದ್ಧೀಕರಣಕ್ಕೆ ಆಗ್ರಹ

ಕೆ.ಸಿ ವ್ಯಾಲಿಗೆ ನಮ್ಮ ವಿರೋಧ ಇಲ್ಲ. ಆದರೆ‌ ಮೂರನೇ ಹಂತದ ಶುದ್ಧೀಕರಣ ಮಾಡಿ ಹರಿಸಬೇಕಿತ್ತು. ಶುದ್ಧೀಕರಣ ‌ಮಾಡದೆ ಹರಿಸಿ ಸಮಸ್ಯೆ ಉಂಟಾಗಿದೆ. ಕಲುಷಿತ ನೀರು ಸೇವಿಸಿ ಜನ‌ ಜಾನುವಾರು‌‌ ಪಕ್ಷಿ‌ ಕೀಟಗಳಿಗೆ ಸಮಸ್ಯೆ ಉಂಟಾಗುತ್ತಿದೆ.‌ ರೋಗಗಳು ಬರುತ್ತಿವೆ. ಬೆಳೆ‌ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಮೂರನೇ ಹಂತದ ಶುದ್ಧೀಕರಣ ಮಾಡಲೇಬೇಕು. ಕಾಲುವೆ‌ ದುರಸ್ತಿ ಮಾಡಬೇಕು ಎಂದು ಜೆಡಿಎಸ್ ಮುಖಂಡ ಒತ್ತಾಯಿಸಿದರು. ಮಳೆ ಬಂದಿದ್ದರಿಂದ ಬಹುತೇಕ ಕೆರೆಗಳು ಉಕ್ಕಿ ಹರಿಯುತ್ತಿವೆ‌. ಯರಗೋಳ್ ಜಲಾಶಯಕ್ಕೆ ಕೆ.ಸಿ.ವ್ಯಾಲಿ ನೀರು ಹರಿಯುತ್ತಿದೆ‌. ಆ ನೀರನ್ನು ಜನರು ಕುಡಿಯುತ್ತಿದ್ದು ಏನಾದರೂ ಸಮಸ್ಯೆ‌ ಉಂಟಾದರೆ ಯಾರು ಗತಿ? ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದರು.

ಸರ್ಕಾರದಿಂದ ಅನುದಾನದಲ್ಲಿ‌ ತಾರತಮ್ಯ

ಶ್ರೀನಿವಾಸಪುರ‌ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಶಾಸಕರಿಗೆ ₹ 50 ಕೋಟಿ‌ ಅನುದಾನ ಜೆಡಿಎಸ್‌ ಬಿಜೆಪಿ ಶಾಸಕರಿಗೆ ₹ 25 ಕೋಟಿ ಕೊಡುವುದಾಗಿ ಹೇಳಿದ್ದಾರೆ. ತಾರತಮ್ಯ ವಿರೋಧಿ ನ್ಯಾಯಾಲಯ‌ ಮೊರೆ ಹೋಗಿದ್ದೇನೆ. ಕ್ಷೇತ್ರಕ್ಕೆ ₹ 100 ಕೋಟಿ ಅನುದಾನ ಬರಬೇಕು. ಈವರೆಗೆ ಒಂದೂ ಮನೆಯನ್ನೂ ಕೊಟ್ಟಿಲ್ಲ. ಅನುದಾನ ಬಿಡುಗಡೆಯಾದರೆ ಪ್ರತಿ ಗ್ರಾಮಕ್ಕೆ ಸೌಕರ್ಯ ಕಲ್ಪಿಸಲಾಗುವುದು. ನಾನು ಯಾವತ್ತೂ‌ ನಾಯಕ ಅಲ್ಲ, ಸೇವಕ‌‌ ಎಂದು ಜಿ.ಕೆ.ವೆಂಕಟಶಿವಾರೆಡ್ಡಿ ‌ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.