
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದೆ ಎಂದು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಮುಖಂಡರು, ಪ್ರತಿಪಕ್ಷ ಜೆಡಿಎಸ್ ಸೇರಿದಂತೆ ಕೆಲ ಮುಖಂಡರಿಂದ ಯೋಜನೆ ಕುರಿತು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಜನಪನಹಳ್ಳಿಯ ಕಾಂಗ್ರೆಸ್ ಮುಖಂಡರೊಂದಿಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಯುವ ಘಟಕದ ಮಾಜಿ ಉಪಾಧ್ಯಕ್ಷ ಜನಪನಹಳ್ಳಿ ನವೀನ್ ಕುಮಾರ್, ‘ಜಿಲ್ಲೆಯ ರೈತರು ದಡ್ಡರಲ್ಲ. ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಏಕೆ ಈ ಯೋಜನೆ ಜಾರಿ ಮಾಡಿಸಿದರು ಎಂಬುದನ್ನೂ ಅವರು ನೋಡಿದ್ದಾರೆ. ತಾವು ಈಗ ಹೇಳುತ್ತಿರುವ ಮಾತನ್ನೂ ಕೇಳಿಸಿಕೊಂಡಿದ್ದಾರೆ. ಕೆ.ಸಿ.ವ್ಯಾಲಿ ಬರುವುದಕ್ಕೂ ಮುನ್ನ ಹಾಗೂ ಈಗ ಏನೆಲ್ಲಾ ಬದಲಾವಣೆ ಆಗಿದೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ’ ಎಂದು ತಿರುಗೇಟು ನೀಡಿದರು.
ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಮುಖಂಡರಾದ ಶೇಷಾಪುರ ಗೋಪಾಲ್, ಕುಡುವನಹಳ್ಳಿ ಶ್ರೀನಿವಾಸ್ ಹಾಗೂ ಇತರೆ ಮುಖಂಡರು ವಾಸ್ತವ ಹರಿಯದೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೆ.ಸಿ.ವ್ಯಾಲಿ ಬಂದ ಮೇಲೆ ಕೇವಲ 200 ರಿಂದ 300 ಅಡಿಗೆ ನೀರು ಸಿಗುತ್ತಿದೆ. ಕೆರೆ ಕಟ್ಟೆಗಳು ತುಂಬುಕೊಂಡಿವೆ. ತರಕಾರಿ ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ. ಹೈನುಗಾರಿಕೆ ಸುಧಾರಿಸಿದೆ. ತೆಂಗು ಸಸಿ ನಾಟಿ ಮಾಡಲಾಗಿದೆ. ಒಣಗುತ್ತಿದ್ದ ಮರಗಳು ಚಿಗುರಿವೆ. ವಿಶ್ವಸಂಸ್ಥೆ ಸಂಸ್ಥೆ, ಕೇಂದ್ರ ಸರ್ಕಾರ, ಭಾರತೀಯ ವಿಜ್ಞಾನ ಸಂಸ್ಥೆ ಮೆಚ್ಚಿವೆ. ವಿರೋಧ ಪಕ್ಷದವರು ಮಾತ್ರ ಅವೈಜ್ಞಾನಿಕ ಎಂದು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹರಿಹಾಯ್ದರು.
ರಮೇಶ್ ಕುಮಾರ್ ಕೆ.ಸಿ.ವ್ಯಾಲಿ ಕಾಲುವೆ ವೀಕ್ಷಣೆ ಮಾಡಿ, ಅಧಿಕಾರಿಗಳೊಂದಿಗೆ ಮಾತನಾಡಿ ಸರ್ವೆಗೆ ಕ್ರಮ ವಹಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಜಿ.ಕೆ.ವೆಂಕಟಶಿವಾರೆಡ್ಡಿ ಈಗ ಎಚ್ಚರವಾಗಿ ಕಾಲುವೆ ವೀಕ್ಷಣೆ ಮಾಡಿ ಟೀಕಿಸಿದ್ದಾರೆ. ಅವರ ಜೊತೆಗಿದ್ದ ಕೆಲವರಂತೂ ರಮೇಶ್ ಕುಮಾರ್ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದು, ಅದನ್ನು ಖಂಡಿಸುತ್ತೇವೆ ಎಂದರು.
ಶೇಷಾಪುರ ಗೋಪಾಲ್ ಹಾಗೂ ಕುಡುವನಹಳ್ಳಿ ಶ್ರೀನಿವಾಸ್ ತಮ್ಮ ವೀರಾವೇಶ ಬಿಟ್ಟು ಬಿಡಬೇಕು . ರೈತರ ಬಗ್ಗೆ ಕಾಳಜಿ ಇದ್ದರೆ ಅವರ ಬಗ್ಗೆ ಗಮನ ಹರಿಸಲಿ ಎಂದು ಹೇಳಿದರು.
ಶ್ರೀನಿವಾಸ್ ಈ ಹಿಂದೆ ರಮೇಶ್ ಕುಮಾರ್ ಜೊತೆ ಇದ್ದಾಗ ಯಾವ ಟೆಂಡರ್ ಪಡೆದಿದ್ದರು ಎಂಬುದು ಗೊತ್ತಿದೆ. ರಮೇಶ್ ಕುಮಾರ್ ಹೆಸರು ಹಿಡಿದು ಮಾತನಾಡುವ ನೈತಿಕತೆ ಅವರಿಗೆ ಇದೆಯೇ? ಮಾತು ಹಿಡಿತದಲ್ಲಿ ಇರಲಿ ಎಂದು ಎಚ್ಚರಿಸಿದರು.
ರಮೇಶ್ ಕುಮಾರ್ ಅವರು ಗದ್ದೆಯಲ್ಲಿ ಪೈರು ಬರುತ್ತದೆ ಎಂದು ತಿಳಿದು ನಾಟಿ ಮಾಡಿದ್ದರು. ಅದರಲ್ಲಿ ತೆನೆ ಬಂದಿದ್ದು ಕಳೆಯೂ ಇದೆ. ಆ ಕಳೆಯನ್ನು ಕಿತ್ತು ಹಾಕುವ ಸಮಯ ಬಂದಿದೆ. ಮನೆಯಲ್ಲಿರುವ ಅವರು ಹೊರಗಡೆ ಬರಲಿದ್ದು, ಒಳ್ಳೆಯ ದಿನಗಳು ಬರಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯ ಎಂ.ವಿ.ಶ್ರೀನಿವಾಸ್, ನಾಯಕರಹಳ್ಳಿ ಗ್ರಾ.ಪಂ ಸದಸ್ಯ ಪ್ರಭಾಕರ್, ಹೋಳೂರು ಗ್ರಾ.ಪಂ ಸದಸ್ಯರಾದ ಎಚ್.ಬಿ.ನಾರಾಯಣಸ್ವಾಮಿ, ವಾಣಿ.ಶ್ರೀನಿವಾಸ್, ವಾನರಾಶಿ ಸದಸ್ಯ ಶಿಲ್ಪ ವೆಂಕಟೇಶ್, ಮಾಜಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಚಲಪತಿ, ಸುರೇಶ್, ಗೋಪಾಲಕೃಷ್ಣ, ಕೃಷ್ಣೇಗೌಡ, ಶ್ರೀರಾಮ್, ಗೋಪಾಲ್ ನಾರಾಯಣಸ್ವಾಮಿ, ವೆಂಕಟೇಶ್ ಇದ್ದರು.
ಆಗ ಏಕೆ ಸುಮ್ಮನಿದ್ದರು?
ಯೋಜನೆ ಜಾರಿ ಆಗುವಾಗ ರಮೇಶ್ ಕುಮಾರ್ ಜೊತೆಗಿದ್ದ ಶೇಷಾಪುರ ಗೋಪಾಲ್ ಆಗ ಏಕೆ ಸುಮ್ಮನಿದ್ದರು? ಈಗ ಏಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ? ರಮೇಶ್ ಕುಮಾರ್ ಅವರ ಪುತ್ರ ಕುಟುಂಬದ ಬಗ್ಗೆ ಮಾತನಾಡದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲವೇ? ಸಾಕ್ಷಿ ಇಲ್ಲದೆ ಏನೇನೋ ಹೇಳಿತ್ತಿದ್ದಾರೆ. ವಿಚಾರ ತಿಳಿದು ಮಾತನಾಡಬೇಕು ಎಂದು ಮುಖಂಡರು ಹೇಳಿದರು.
ಆಗ ಸಮಸ್ಯೆ ಇರಲಿಲ್ಲವೇ?
ಹಿಂದೆ 400 ಕಿ.ಮೀ ದೂರ ಇರುವ ತಮಿಳುನಾಡಿಗೆ ಬೆಂಗಳೂರಿನ ತ್ಯಾಜ್ಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಆಗ ಅಲ್ಲಿನ ರೈತರು ಮೋಟಾರ್ ಇಟ್ಟು ನೀರು ತೆಗೆದುಕೊಂಡು ತರಕಾರಿ ಬೆಳೆದು ಬೆಂಗಳೂರಿಗೆ ಬಂದು ಮಾರಾಟ ಮಾಡುತ್ತಿದ್ದರು. ಆಗ ಯಾವುದೇ ಸಮಸ್ಯೆ ಇರಲಿಲ್ಲವೇ ಎಂದು ಪ್ರಶ್ನಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.