
ಕೋಲಾರ: ತಾಲ್ಲೂಕಿನ ಕುಡುವನಹಳ್ಳಿ ಗ್ರಾಮದಲ್ಲಿ ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವ ಕಾಲುವೆ ಉಕ್ಕಿ ಜಮೀನುಗಳು ಜಲಾವೃತವಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹತ್ತಾರು ಎಕರೆ ಜಮೀನಿನಲ್ಲಿ ನೀರು ನಿಂತಿದ್ದು, ಕೆರೆಯಂತೆ ಭಾಸವಾಗುತ್ತಿದೆ. ರಾಗಿ, ಮಾವು, ರೇಷ್ಮೆ ಸೇರಿದಂತೆ ಹಲವಾರು ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಜಮೀನುಗಳ ಪಕ್ಕದಲ್ಲಿಯೇ ಕೆ.ಸಿ ವ್ಯಾಲಿ ಕಾಲುವೆ ಇದ್ದು, ಉಕ್ಕಿ ಹರಿಯುತ್ತಿದೆ. ಆದರೆ, ಕಾಲುವೆ ಕಿರಿದಾಗಿದ್ದು ಜೊಂಡು, ಗಿಡಗಳು, ಊಳು ತುಂಬಿಕೊಂಡು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ. ಹೀಗಾಗಿ, ಕಾಲುವೆ ಉಕ್ಕಿ ಹರಿದು ಜಮೀನಿನೊಳಗೆ ನುಗ್ಗಿದೆ. ಇನ್ನು ನಾಲ್ಕು ತಿಂಗಳು ಜಮೀನಿನಲ್ಲಿ ಏನೂ ಬೆಳೆಯಲು ಸಾಧ್ಯವಿಲ್ಲದಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೇಳಿಕೊಂಡರು.
ಎಸ್.ಅಗ್ರಹಾರ ಕೆರೆಯಿಂದ ಆರಂಭವಾಗಿ ಜನಘಟ್ಟ, ಮುದುವಾಡಿ ಮೂಲಕ ಕಾಲುವೆಯಲ್ಲಿ ನೀರು ಹರಿದು ಬರುತ್ತಿದೆ. ನಂತರ ಮಣಿಘಟ್ಟ ಕೆರೆ ಸೇರುತ್ತದೆ. ಆ ಹಾದಿಯಲ್ಲಿ ಸಮಸ್ಯೆ ನಿರ್ಮಾಣವಾಗಿದೆ.
ಈ ಪ್ರದೇಶವು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಸಂಸದ ಎಂ.ಮಲ್ಲೇಶ್ ಬಾಬು, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಮುಖಂಡ ಶೇಷಾಪುರ ಗೋಪಾಲ್ ಹಾಗೂ ಸ್ಥಳೀಯ ಮುಖಂಡರು ಹಾಗೂ ರೈತಯ ಭೇಟಿ ನೀಡಿ ಪರಿಶೀಲಿಸಿದರು.
ಎರಡು ವರ್ಷಗಳ ಹಿಂದೆಯೂ ಇದೇ ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಗ ಎಚ್ಚೆತ್ತುಕೊಂಡಿದ್ದರೆ ಪರಿಹಾರ ಕಂಡುಕೊಳ್ಳಬಹುದಿತ್ತು. ಎಸ್.ಅಗ್ರಹಾರದಿಂದ ಸರ್ವೆ ಮಾಡಿ ಕಾಲುವೆ ದುರಸ್ತಿ ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ವೆಂಕಟಶಿವಾರೆಡ್ಡಿ ಆಗ್ರಹಿಸಿದರು.
ಮುಂದೆ ಊರಿನೊಳಗೆ ನೀರು ನುಗ್ಗುವ ಸಾಧ್ಯತೆ ಇದೆ. ಅಷ್ಟರೊಳಗೆ ಸರಿಪಡಿಸಬೇಕು ಎಂದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ‘ಇದು ಮನುಷ್ಯ ನಿರ್ಮಿತ ಎಡವಟ್ಟು. ಕೆ.ಸಿ.ವ್ಯಾಲಿಗೆ ಸಂಬಂಧಿಸದ ಪೈಪ್ಗಳನ್ನು ಎಲ್ಲಿ ಬೇಕೆಂದಲ್ಲಿ ಎಸೆದು ಹೋಗಿದ್ದಾರೆ. ನೀರು ಸರಿಯಾಗಿ ಹರಿಯುಂತೆ ಮಾಡುವುದು ಕೆ.ಸಿ ವ್ಯಾಲಿ ಎಂಜಿನಿಯರ್ಗಳ ಕೆಲಸ’ ಎಂದು ಹೇಳಿದರು.
ಸ್ಥಳದಿಂದಲೇ ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ದೂರವಾಣಿಯಲ್ಲಿ ಮಾತನಾಡಿ, ಕೂಡಲೇ ಕಾರ್ಯಪಾಲಕ ಎಂಜಿನಿಯರ್ ಅನ್ನು ಕಳಿಸಿ ಪರಿಶೀಲನೆ ನಡೆಸಿ ವರದಿ ಪಡೆದು ಕ್ರಮ ವಹಿಸುವಂತೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.