
ಕೋಲಾರ: ಕೆಡಿಪಿ ಸಭೆಯ ತೀರ್ಮಾನದಂತೆ ಜಂಟಿ ಸರ್ವೆ ಮುಗಿದು ವರದಿ ಬರುವ ತನಕ ಅರಣ್ಯ ಇಲಾಖೆಯು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡಬಾರದು. ತೊಂದರೆ ಕೊಟ್ಟವರ ವಿರುದ್ಧ ಹಾಗೂ ಮುಳಬಾಗಿಲಿನಲ್ಲಿ ಮನೆ ಕೆಡವಿ ಹಾಕಿದ ಅರಣ್ಯ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಎಸ್ಪಿಗೆ ಸೂಚನೆ ನೀಡಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನ ಬಳಿ ಶುಕ್ರವಾರ ವಿವಿಧ ಸಂಘಟನೆಗಳು ಹಾಗೂ ರೈತರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
‘ರೈತರ ಹಾಗೂ ಸರ್ಕಾರಿ ಗೋಮಾಳ ಜಮೀನುಗಳಲ್ಲಿ ಅರಣ್ಯ ಇಲಾಖೆಯವರ ಕೆಲಸ ಏನು? ರೈತರಿಗೆ ವಿನಾಕಾರಣ ತೊಂದರೆ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಇಲ್ಲವಾಗಿದೆ’ ಎಂದು ರೈತರು ದೂರಿದರು.
ಜಿಲ್ಲೆಯ ರೈತರ ಮೇಲೆ ದಾಖಲಾಗಿರುವ ಎಫ್ಐಆರ್ ಸಂಬಂಧ ‘ಬಿ ರಿಪೋರ್ಟ್’ ಹಾಕಿ ಮುಕ್ತಾಯ ಮಾಡಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಜಿಲ್ಲಾ ಮುಖಂಡರಾದ ಸಿಪಿಎಂ ಗೋಪಾಲ್, ಆರ್.ಶ್ರೀನಿವಾಸನ್, ಗಾಂಧಿನಗರ ನಾರಾಯಣಸ್ವಾಮಿ, ಟಿ.ಎಂ.ವೆಂಕಟೇಶ್, ಪಾತಕೋಟೆ ನವೀನ್ ಕುಮಾರ್, ಹರಟಿ ಪ್ರಕಾಶ್, ಡಾ.ಗೋವಿಂದಪ್ಪ, ವೆಂಕಟರವಣಪ್ಪ, ಭಟ್ರಹಳ್ಳಿ ಮಂಜುನಾಥ್, ಚಲಪತಿ, ದರ್ಶನ್ ಹಾಗೂ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.