ADVERTISEMENT

ಕೆಜಿಎಫ್‌: ಅಂತರ್ಜಲ ಹೆಚ್ಚಳಕ್ಕೆ ಸಸಿಗಳ ನಾಟಿ

ನಗರಸಭೆಯಲ್ಲಿ ಪಿಡಿಒಗಳೊಂದಿಗೆ ಸಿಇಒ ಸಭೆ

​ಪ್ರಜಾವಾಣಿ ವಾರ್ತೆ
Published 16 ಮೇ 2020, 16:56 IST
Last Updated 16 ಮೇ 2020, 16:56 IST
ಕೆಜಿಎಫ್ ರಾಬರ್ಟ್‌ಸನ್ ಪೇಟೆಯಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ಮಾತನಾಡಿದರು. ಶಾಸಕಿ ಎಂ.ರೂಪಕಲಾ, ಅಧಿಕಾರಿಗಳಾದ ರವೀಂದ್ರ, ಕೆ.ರಮೇಶ್‌ ಹಾಜರಿದ್ದರು
ಕೆಜಿಎಫ್ ರಾಬರ್ಟ್‌ಸನ್ ಪೇಟೆಯಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ಮಾತನಾಡಿದರು. ಶಾಸಕಿ ಎಂ.ರೂಪಕಲಾ, ಅಧಿಕಾರಿಗಳಾದ ರವೀಂದ್ರ, ಕೆ.ರಮೇಶ್‌ ಹಾಜರಿದ್ದರು   

ಕೆಜಿಎಫ್: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನಿಷ್ಠ ನಾಲ್ಕು ಕೆರೆಗಳ ಸುತ್ತ ಸಸಿಗಳನ್ನು ನೆಡಬೇಕಿದೆ. ಕೆಜಿಎಫ್‌ ತಾಲ್ಲೂಕಿನಲ್ಲಿ ನೆಡಲು ಅರಣ್ಯ ಇಲಾಖೆ 3.50 ಲಕ್ಷ ಸಸಿಗಳನ್ನು ಸಿದ್ಧಗೊಳಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್‌ ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಶನಿವಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

2024 ವೇಳೆಗೆ ಎಲ್ಲ ಮನೆಗಳಿಗೂ ಪ್ರತ್ಯೇಕ ನಲ್ಲಿ ನೀರಿನ ಸಂಪರ್ಕ ಕೊಡಬೇಕಿದೆ. ಆರ್ಥಿಕವಾಗಿ ಸಬಲರಾಗಿರುವ ಜನರ ಮನೆಗಳ ನೀರು ಪೂರೈಕೆಗೆ ಮೀಟರ್ ಅಳವಡಿಸಬೇಕು. ಪಂಚಾಯಿತಿಗಳು ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ADVERTISEMENT

ಉದ್ಯೋಗ ಖಾತ್ರಿ ಯೋಜನೆಯಡಿ ಗಿಡ ಬೆಳೆಸುವುದು ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಆದ್ಯತೆ ನೀಡಲಾಗುತ್ತಿದೆ. ಕೆಜಿಎಫ್‌ ಪ್ರತ್ಯೇಕ ತಾಲ್ಲೂಕಾಗಿದ್ದರೂ, ಕೆಲವೊಂದು ಅನುದಾನ ಇನ್ನೂ ಬಂಗಾರಪೇಟೆ ತಾಲ್ಲೂಕಿನ ಹೆಸರಿನಲ್ಲಿ ಬರುತ್ತಿದೆ. ಅದನ್ನು 50:50 ಅನುಪಾತದಲ್ಲಿ ವಿತರಣೆ ಮಾಡಲಾಗುವುದು ಎಂದು ದರ್ಶನ್ ಹೇಳಿದರು.

ಶಾಸಕಿ ಎಂ.ರೂಪಕಲಾ ಮಾತನಾಡಿ, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ವಾಟರ್ ಮನ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರೆಲ್ಲರೂ ನಿಗದಿತ ಆದಾಯಕ್ಕೆ ದಾರಿ ಕಂಡುಕೊಂಡಿದ್ದಾರೆ. ಅವರ ವಿರುದ್ಧ ಪಿಡಿಒಗಳು ಕ್ರಮ ಜರುಗಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೇರೆ ತಾಲ್ಲೂಕುಗಳಿಗೆ ಕೆ.ಸಿ. ವ್ಯಾಲಿ ಯೋಜನೆ ನೀರು ಬರುತ್ತಿರುವುದರಿಂದ ಅಂತರ್ಜಲ ಹೆಚ್ಚಾಗಿದೆ. ನಮ್ಮಲ್ಲಿ 1,400 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ನೀರಿನ ಸಮಸ್ಯೆ ನಿವಾರಿಸಲು ಮತ್ತಷ್ಟು ಅನುದಾನ ತರಲಾಗುವುದು ಎಂದರು.

ರಾಮಸಾಗರ ಕೆರೆ ಅಂಚಿನಲ್ಲಿ ಕನಿಷ್ಠ 3,000 ಗಿಡಗಳನ್ನು ನೆಡಬೇಕು ಎಂದು ರಾಮಸಾಗರ ಪಿಡಿಒಗೆ ದರ್ಶನ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ತಹಶೀಲ್ದಾರ್ ಕೆ.ರಮೇಶ್‌, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.