ಕೆಜಿಎಫ್: ಬಿಜಿಎಂಎಲ್ಗೆ ಸೇರಿದ ಗಣಿಯಲ್ಲಿ ಇಳಿಯಲು ಹೋಗಿ ಮೃತಪಟ್ಟ ಮತ್ತೊಬ್ಬರ ಶವ ಶನಿವಾರ ಪತ್ತೆಯಾಗಿದೆ. ಆದರೆ ಮೃತದೇಹವನ್ನು ಹೊರತೆಗೆಯಲು ಅಗ್ನಿಶಾಮಕದಳ ಕೈ ಚೆಲ್ಲಿದೆ.
ಚಿನ್ನ ಮಿಶ್ರಿತ ಮಣ್ಣನ್ನು ಕದಿಯಲು ಬುಧವಾರ ರಾತ್ರಿ ತಂಡವೊಂದು ಗಣಿಯೊಳಗೆ ಇಳಿದಿತ್ತು. ಆಗ ಮೂವರು ಉಸಿರುಕಟ್ಟಿ ಮೃತಪಟ್ಟಿದ್ದರು. ಅವರ ಪೈಕಿ ಇಬ್ಬರ ಶವವನ್ನು ಹೊರತೆಗೆಯಲಾಗಿತ್ತು. ಪಡಿಯಪ್ಪ ಎಂಬುವವರ ಶವ ಗಣಿಯೊಳಗೆ ಸಿಕ್ಕಿ ಹಾಕಿಕೊಂಡಿತ್ತು.
ಗಣಿಯ ಸುಮಾರು 90 ಅಡಿ ಆಳದಲ್ಲಿ ಮೃತದೇಹ ಪತ್ತೆಯಾಗಿದೆ. ಶವದಿಂದ ದುರ್ವಾಸನೆ ಬರುತ್ತಿದೆ. ಗಣಿಯೊಳಗೆ ಕೇವಲ ಹನ್ನೊಂದು ಅಡಿವರೆಗೆ ಮಾತ್ರ ಶುದ್ಧ ಗಾಳಿ ಸಿಗುತ್ತಿದೆ. ನಂತರ ವಿಷಾನಿಲ ತುಂಬಿದೆ. ಇದರಿಂದಾಗಿ ಅರ್ಧ ಗಂಟೆ ಕೆಲಸ ಮಾಡುವ ಆಕ್ಸಿಜನ್ ಸಿಲಿಂಡರ್ ಧರಿಸಿ ಗಣಿಯೊಳಗೆ ಇಳಿದು ದೇಹವನ್ನು ಹೊರತೆಗೆಯಲು ಅಗ್ನಿಶಾಮಕದಳ ಸಿಬ್ಬಂದಿ ಹಿಂದೆಜ್ಜೆ ಇಟ್ಟಿದ್ದಾರೆ.
ಶವವನ್ನು ಹೊರತೆಗೆಯುವ ಅನಿವಾರ್ಯತೆ ಈಗ ಗಣಿ ಅಧಿಕಾರಿಗಳ ಮೇಲೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.