ಕೆಜಿಎಫ್: ಅಕ್ರಮ ಸಕ್ರಮ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಬಳಸುವ ವಿದ್ಯುತ್ ಸಂಪರ್ಕ ಅಧಿಕೃತಗೊಳಿಸಿಕೊಳ್ಳಲು ಬೆಸ್ಕಾಂ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದು ರೈತ ಸಮುದಾಯದಲ್ಲಿ ಅಸಮಾಧಾನ ಮೂಡಿದೆ.
ಕಳೆದ ದಶಕದಲ್ಲಿ 10 ಎಚ್ಪಿ ಕೊಳವೆಬಾವಿಗೆ ವಿದ್ಯುತ್ ಸಂಪರ್ಕಗಾಗಿ ರೈತರು ₹50 ಪಾವತಿಸಿ ನೋಂದಣಿ ಮಾಡಿದ್ದರು. ಈಗ ಅದನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಬೆಸ್ಕಾಂ ಸೆಪ್ಟೆಂಬರ್ ತಿಂಗಳಲ್ಲಿ ರೈತರಿಗೆ ನೋಟಿಸ್ ನೀಡಿತ್ತು. ಅದರಲ್ಲಿ ಭದ್ರತಾ ಠೇವಣಿ, ಮಾಪಕ ಭದ್ರತಾ ಠೇವಣಿ, ಟಿಪಿ ಬಾಕ್ಸ್ ಮತ್ತು ದಂಡವನ್ನು ವಿಧಿಸಲಾಗುತ್ತಿದೆ. ಆದರೆ, ಹಣ ಕಟ್ಟಲು ಹೋದಾಗ ಸಿಸ್ಟಮ್ನಲ್ಲಿ ನಿಮ್ಮ ಹೆಸರು ರಿಫ್ಲೆಕ್ಟ್ ಆಗುತ್ತಿಲ್ಲ ಎಂದು ಬೆಸ್ಕಾಂ ಸಿಬ್ಬಂದಿ ಹಣ ಕಟ್ಟಿಸಿಕೊಳ್ಳಲಿಲ್ಲ. ಸೆಪ್ಟೆಂಬರ್ ಅಂತ್ಯಕ್ಕೆ ನೋಟಿಸ್ ಅವಧಿ ಮುಗಿದಿದ್ದರಿಂದ ಅವಧಿ ಮುಗಿದುಹೋಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಈಗ ಹಣ ಕಟ್ಟಿಸಿಕೊಳ್ಳಲು ಸಿದ್ಧರಿಲ್ಲ. ಹೊಸದಾಗಿ ಸಂಪರ್ಕ ಪಡೆಯಬೇಕಾದರೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಹಣ ಕಟ್ಟಿಸಿಕೊಳ್ಳುವ ಪ್ರಕ್ರಿಯೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿಲ್ಲ. ಪ್ರಚಾರ ಕೂಡ ಮಾಡಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಹಾಗಾಗಿ ಕೂಡಲೇ ಅವಧಿ ವಿಸ್ತರಿಸಬೇಕು. ಬೆಸ್ಕಾಂನಲ್ಲಿ ಕಾಯಂ ಅಧಿಕಾರಿಗಳು ಇಲ್ಲದೆ ಪ್ರಭಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ತಾಲ್ಲೂಕಿನ ರೈತರಿಗೆ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಬೇತಮಂಗಲ ಎಇಇ ರೈತರನ್ನು ಆಸಡ್ಡೆಯಿಂದ ಕಾಣುತ್ತಿದ್ದಾರೆ. ಮಾಹಿತಿ ನೀಡಲು ನಿರಾಕರಿಸುತ್ತಾರೆ.ಅಶ್ವತ್ ನಾಯ್ಡು, ರೈತ,
ದಿನಾಂಕ ವಿಸ್ತರಣೆಗೆ ಬೆಸ್ಕಾಂ ಮುಖ್ಯ ಕಚೇರಿಗೆ ಕೋರಲಾಗಿದೆ. ವಿಸ್ತರಣೆಯಾಗುವ ಸಂಭವ ಇದ್ದು, ರೈತರು ಆತಂಕ ಪಡಬೇಡಿ.ಕವಿತಾ, ಕಾರ್ಯಪಾಲಕ ಇಂಜಿನಿಯರ್, ಬೆಸ್ಕಾಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.