ಕೆಜಿಎಫ್: ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಎರಡು ಜೋಡಿಗಳು ಒಂದಾದವು.
ನ್ಯಾಯಾಧೀಶ ವಿನೋದ್ ಕುಮಾರ್ ಅವರ ಕಚೇರಿಯಲ್ಲಿ ಎರಡು ಜೋಡಿಗಳು ವಿಚ್ಛೇದನ ವಾಪಸ್ ಪಡೆದು ಪುನಃ ಒಂದಾದರು. ನ್ಯಾಯಾಧೀಶರ ಮುಂದೆ ಎರಡೂ ಜೋಡಿಗಳು ಪರಸ್ಪರ ಹೂಮಾಲೆ ಬದಲಾಯಿಸಿಕೊಂಡು ಇನ್ನು ಮುಂದೆ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸುತ್ತೇವೆ ಎಂದು ವಾಗ್ದಾನ ಮಾಡಿದರು.
ನ್ಯಾಯಾಲಯದಲ್ಲಿ ಒಟ್ಟು 7,176 ಪ್ರಕರಣಗಳು ಬಾಕಿ ಇದ್ದು, ಅವುಗಳ ಪೈಕಿ 3,518 ಪ್ರಕರಣಗಳ ವಿಚಾರಣೆ ನಡೆಸಲಾಯಿತು. ಅವುಗಳ ಪೈಕಿ 34,44 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು. ಒಟ್ಟು ₹2,95,24,728 ರಾಜಿ ಸಂಧಾನದ ಮೂಲಕ ಇತ್ಯರ್ಥವಾಯಿತು.
ಜೋಡಿ ಒಂದುಗೂಡಿಸಿದ ಬಳಿಕ ಮಾತನಾಡಿದ, ನ್ಯಾಯಾಧೀಶ ಆರ್. ಎಂ. ನದಾಫ್, ಜೀವನದಲ್ಲಿ ಕೆಲವೊಂದು ಕಹಿ ಘಟನೆಗಳು ನಡೆಯುತ್ತದೆ. ಅವುಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಉತ್ತಮ ಸಂಸಾರ ನಡೆಸಬೇಕು ಎಂದರು.
ಮದುವೆಯಾದ ಮೇಲೆ ಹೆಂಡತಿ ಮತ್ತು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಅವರ ಮನಸ್ಸಿಗೆ ನೋವನ್ನು ಉಂಟು ಮಾಡಬಾರದು. ಸಂಸಾರದಲ್ಲಿ ಹೊಂದಾಣಿಕೆಯನ್ನು ಇಟ್ಟುಕೊಂಡು ಜೀವನ ಮಾಡಬೇಕು. ಮುಂದೆ ಯಾವುದೇ ಕಾರಣಕ್ಕೂ ನ್ಯಾಯಾಲಯದ ಮೆಟ್ಟಿಲು ಹತ್ತಬಾರದು. ಒಳ್ಳೆಯ ದಂಪತಿಗಳಾಗಿ ಜೀವನ ನಡೆಸಿ ಎಂದು ಬುದ್ಧಿವಾದ ಹೇಳಿದರು
ಲೋಕ ಅದಾಲತ್ನಲ್ಲಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ, ಮುಜಾಫರ್ ಎ.ಮಾಂಜರಿ, ಎಂ.ಮಂಜು ಮತ್ತು ಶಮೀದಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.