ADVERTISEMENT

ಕೋಲಾರ | 19 ತಿಂಗಳಲ್ಲಿ 1,190 ಮಂದಿ ಆತ್ಮಹತ್ಯೆ ಯತ್ನ!

ಮನಸ್ಸು ಹಗುರಾಗಿಸುವ ‘ಟೆಲಿ ಮನಸ್‌’; ಸಹಾಯವಾಣಿಗೆ ಕೋಲಾರ ಜಿಲ್ಲೆಯಿಂದ ಕರೆಗಳ ಸುರಿಮಳೆ

ಕೆ.ಓಂಕಾರ ಮೂರ್ತಿ
Published 10 ಸೆಪ್ಟೆಂಬರ್ 2025, 4:26 IST
Last Updated 10 ಸೆಪ್ಟೆಂಬರ್ 2025, 4:26 IST
<div class="paragraphs"><p> ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೋಲಾರ: ಪ್ರೇಮ ವೈಫಲ್ಯ, ಪರೀಕ್ಷೆಯಲ್ಲಿ ಅನುತ್ತೀರ್ಣ, ಕೌಟುಂಬಿಕ ಕಲಹ, ಹಣಕಾಸು ಸಮಸ್ಯೆ, ನಿರುದ್ಯೋಗ, ಖಿನ್ನತೆ, ಒತ್ತಡ ಸೇರಿದಂತೆ ವಿವಿಧ ಮಾನಸಿಕ ಅನಾರೋಗ್ಯ ತೊಂದರೆಗಳಿಂದ ಕೋಲಾರ ಜಿಲ್ಲೆಯಲ್ಲಿ ಕಳೆದ 19 ತಿಂಗಳಲ್ಲಿ ಸುಮಾರು 1,190 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ಘಟಕದ ಅಂಕಿ ಅಂಶಗಳ ಪ್ರಕಾರ 2024ರ ಏಪ್ರಿಲ್‌ ಆರಂಭದಿಂದ 2025ರ ಮಾರ್ಚ್‌ ಅಂತ್ಯದವರೆಗೆ 865 ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಾಲಿನಲ್ಲಿ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ 327 ಜನರು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಾರೆ. ಕೊನೆ ಕ್ಷಣದ ಚಿಕಿತ್ಸೆ, ಮಧ್ಯ ಪ್ರವೇಶ, ತಡೆಯುವಿಕೆಯಿಂದ ಇವರು ಬದುಕುಳಿದ್ದಾರೆ. ಇಂಥವರಿಗೆ ‘ಮನೋವ್ಯಾಧಿ’ ಚಿಕಿತ್ಸೆ ನೀಡಲಾಗಿದೆ.

ADVERTISEMENT

ಮನೋವೈದ್ಯರು, ಮನೋ ಶಾಸ್ತ್ರಜ್ಞರು, ಆಪ್ತ ಸಮಾಲೋಚಕರು ಇಂಥವರ ಮನೆಗೆ ಹೋಗಿ ಅಥವಾ ಆಸ್ಪತ್ರೆಯಲ್ಲಿ ಅಥವಾ ಟೆಲಿ ಕೌನ್ಸೆಲಿಂಗ್‌ ಮೂಲಕ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮಾನಸಿಕ ಒತ್ತಡ, ಖಿನ್ನತೆ ದೊಡ್ಡ ಸವಾಲಾಗಿದೆ. ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ, ಅದರಲ್ಲಿ ಬರುವ ಕೆಲ ಘಟನೆಗಳು ಅನಾಹುತಕ್ಕೆ ಕಾರಣವಾಗುತ್ತಿವೆ. ಇದರಿಂದ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದೂ ಉಂಟು.

‘15ರಿಂದ 30 ವರ್ಷದೊಳಗಿನವರು ಹಾಗೂ 65 ವರ್ಷ ಮೇಲಿನವರು ಹೆಚ್ಚಾಗಿ ಆತ್ಮಹತ್ಯೆಗೆ ಯತ್ನಿಸುವುದು ಕಂಡುಬರುತ್ತಿದೆ. ಜಿಲ್ಲಾ ಮಾನಸಿಕ ಆರೋಗ್ಯ ಘಟಕದಿಂದ ಜಾಗೃತಿ ಮೂಡಿಸುವ, ಮಾನಸಿಕ ಸ್ಥೈರ್ಯ ತುಂಬುವ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ ಮನೋ ಶಾಸ್ತ್ರಜ್ಞ ಶ್ರೀನಾಥ್‌.

ಪೋಷಕರು ಬೈಯ್ದರೆಂದೋ, ಕೇಳಿಸಿದ್ದನ್ನು ಕೊಡಿಸಲಿಲ್ಲವೆಂದೋ, ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿದ್ದಕ್ಕೆ, ಪ್ರೇಮ ವೈಫಲ್ಯ, ಅತ್ತೆ–ಸೊಸೆ ಜಗಳ, ಪತಿ–ಪತ್ನಿ ವೈಮನಸ್ಸು, ಹಣಕಾಸು ಸಮಸ್ಯೆ, ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಜಿಲ್ಲೆಯಲ್ಲಿ ಕಂಡುಬಂದಿದೆ.

ಜಿಲ್ಲಾ ಮಾನಸಿಕ ಆರೋಗ್ಯ ಘಟಕದಿಂದ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಘಟಕದಲ್ಲಿ ಮನೋವೈದ್ಯ, ಮನೋಶಾಸ್ತ್ರಜ್ಞ, ಇಬ್ಬರು ಸ್ಟಾಫ್‌ ನರ್ಸ್‌, ಸಾಮಾಜಿಕ ಕಾರ್ಯಕರ್ತರು ಇದ್ದಾರೆ.

ಈ ಘಟಕದಿಂದ ಮಾನಸಿಕ ಅಸ್ವಸ್ಥರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಅಂಥವರಿಗೆ ಯುಡಿಐಡಿ ಕಾರ್ಡ್‌ ಕೂಡ ಮಾಡಿಸಿಕೊಡುತ್ತಿದೆ, ಪಿಂಚಣಿಯನ್ನೂ ಕೊಡಲಾಗುತ್ತಿದೆ.

ಇದಲ್ಲದೇ, ಸಾವಿರಾರು ಮಂದಿ ಹಲವಾರು ಸಮಸ್ಯೆ ಹೊತ್ತು ‘ಟೆಲಿ ಮನಸ್‌’ ಸಹಾಯವಾಣಿಗೆ ಕರೆ ಮಾಡಿ ತಳಮಳ ಹೇಳಿಕೊಳ್ಳುತ್ತಿದ್ದಾರೆ. ತಕ್ಷಣವೇ ಮಾನಸಿಕ ಆರೋಗ್ಯ ತಂಡದವರು ಆಪ್ತ ಸಮಾಲೋಚನೆ, ಸ್ಥೈರ್ಯ ತುಂಬಿ ಅದೆಷ್ಟೊ ಜನರ ಮನಸ್ಸು ಬದಲಾಯಿಸಿ ಆತ್ಮಹತ್ಯೆಯಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಾನಸಿಕ ಒತ್ತಡ ನಿಭಾಯಿಸಲು ಸಹಾಯ ಮಾಡಿದ್ದಾರೆ.

‘ಟೆಲಿ ಮನಸ್‌’ಗೆ ಜಿಲ್ಲೆಯಿಂದಲೂ ನಿತ್ಯ ಹತ್ತಾರು ಕರೆಗಳು ಹೋಗುತ್ತಿವೆ. ‘ನಾನು ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತಿದೆ. ಪ್ರೀತಿಸಿದ ಹುಡುಗ ಬೇರೆ ಹುಡುಗಿ ಜೊತೆ ಸುತ್ತುತ್ತಿದ್ದು, ಮನಸ್ಸಿಗೆ ತುಂಬಾ ನೋವಾಗುತ್ತಿದೆ, ಸಾಯಬೇಕು ಎನಿಸುತ್ತಿದೆ. ತಂದೆ ತಾಯಿ ನಿತ್ಯ ಗಲಾಟೆ ಮಾಡಿಕೊಳ್ಳುತ್ತಾರೆ, ಇದರಿಂದ ಬೇಸರವಾಗಿದ್ದು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ’ ಎಂದೆಲ್ಲಾ ಹೇಳಿಕೊಂಡು ಕರೆ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ. ವಿದ್ಯಾರ್ಥಿಗಳು, ಯುವಕರು, ಮದ್ಯವ್ಯಸನಿಗಳು, ಪತಿ-ಪತ್ನಿ, ವೃದ್ಧರು ಸೇರಿದಂತೆ ಮಾನಸಿಕ ಒತ್ತಡಗಳಿಂದ ಬಳಲುವವರು ಸಹಾಯವಾಣಿಗೆ ಕರೆ ಮಾಡಿ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದಾರೆ.

ಮಾನಸಿಕ ಅನಾರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ರಾಜ್ಯದ ಅಂಕಿ ಅಂಶ ಪರಿಗಣಿಸುವುದಾದರೆ ಕಳೆದ ಮೂರು ವರ್ಷದಲ್ಲಿ ಸುಮಾರು 21 ಲಕ್ಷ ಕರೆಗಳು ‘ಟೆಲಿ ಮನಸ್‌’ ಸಹಾಯವಾಣಿಗೆ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.