
ಕೋಲಾರ: ಪಟಾಕಿ ಚೀಟಿ, ಯುಗಾದಿ ಚೀಟಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂದು ಮಹಿಳೆಯರು ಆರೋಪಿಸಿ, ನಗರದ ಪೊಲೀಸ್ ಠಾಣೆ ಮುಂದೆ ಸೇರಿ ಆಕ್ರೋಶಭರಿತರಾಗಿ ಕಣ್ಣೀರಿಟ್ಟಿದ್ದಾರೆ.
ಚೀಟಿ ಮಾಲೀಕನ ಮನೆಗೆ ಮಹಿಳೆಯರು ಮುತ್ತಿಗೆ ಹಾಕಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಆರೋಪಿ ವೆಂಕಟೇಶಪ್ಪ ಎಂಬಾತನನ್ನು ಮಹಿಳೆಯರೇ ಹಿಡಿದು ಕೊಟ್ಟಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ದಿನಸಿ, ಪಟಾಕಿ ಚೀಟಿ, ಯುಗಾದಿ ಚೀಟಿ, ವರಮಹಾಲಕ್ಷ್ಮಿ ಚೀಟಿ ಹೆಸರಲ್ಲಿ ವರ್ಷಗಳಿಂದ ಹಣ ಪಡೆದು ವೆಂಕಟೇಶಪ್ಪ, ಗೌರತಮ್ಮ ಎಂಬುವರು ವಂಚನೆ ಮಾಡಿದ್ದಾರೆ ಎಂದು ಮಹಿಳೆಯರು ದೂರಿದ್ದಾರೆ. ಹಣವನ್ನೆಲ್ಲಾ ಎತ್ತಿಕೊಂಡು ಓಡಿ ಹೋಗಿದ್ದ ಆತ ಈಗ ಹಣ ಕಟ್ಟಿಯೇ ಇಲ್ಲ ಎಂಬುದಾಗಿ ಹೇಳುತ್ತಿದ್ದು, ಕೇಳಿದರು ಹೊಡೆಯಲು ಬರುತ್ತಾರೆ. ದಿಕ್ಕೇ ತೋಚುತ್ತಿಲ್ಲ ಎಂದು ಗೋಳಿಟ್ಟರು.
ನಗರದ ಶಾಂತಿನಗರ, ಕಾರಂಜಿ ಕಟ್ಟೆ ಸೇರಿದಂತೆ ಜಿಲ್ಲೆಯ 500ಕ್ಕೂ ಹೆಚ್ಚು ಮಹಿಳೆಯರು ಕೋಟ್ಯಂತರ ಮೊತ್ತದ ಚೀಟಿ ಹಾಕಿದ್ದರು ಎಂಬುದು ಗೊತ್ತಾಗಿದೆ. ದಿನಸಿ ಹಾಗೂ ಇತರ ಕೊಡುಗೆ ಸಿಗುತ್ತದೆ ಎಂದು ಭಾವಿಸಿದ್ದರು. ವೆಂಕಟೇಶಪ್ಪ ಐದು ವರ್ಷಗಳಿಂದ ಚೀಟಿ ವ್ಯವಹಾರದಲ್ಲಿ ತೊಡಗಿರುವುದು ಗೊತ್ತಾಗಿದೆ. ಹಣ ಕಳೆದುಕೊಂಡ ಮಹಿಳೆಯರು ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂತು. ಸಹಿ ಹಾಕಿಸಿಕೊಂಡು ಹಣ ಪಡೆದಿರುವ ಪುಸ್ತಕ ಹಾಗೂ ಕಾರ್ಡ್ಗಳನ್ನು ಪ್ರದರ್ಶಿಸಿದರು. ತಮಗೆ ಪೊಲೀಸರೇ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.